ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ತಾಂತ್ರಿಕ ಶಿಕ್ಷಣ ಕೋರ್ಸ್ಗಳಿಗೆ ಕನಿಷ್ಠ ಮತ್ತು ಗರಿಷ್ಠ ಶುಲ್ಕ ನಿಗದಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಲಾಭಖೋರತನವನ್ನು ತಡೆಯುವುದಕ್ಕಾಗಿ ಟಿಎಂಎಪೈ ಪ್ರತಿಷ್ಠಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನೀಡಿದೆ. ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅವರ ನೇತೃತ್ವದ ಸಮಿತಿಗೆ ಈ ಹೊಣೆಯನ್ನು ವಹಿಸಲಾಗಿದೆ.

ಗರಿಷ್ಠ ಮಿತಿಯ ಜತೆಗೆ ದೇಶದಾದ್ಯಂತ ಏಕರೂಪದ ಕನಿಷ್ಠ ಶುಲ್ಕ ಮಿತಿಯೂ ಇರಬೇಕು ಎಂದು ತಾಂತ್ರಿಕ ಕಾಲೇಜುಗಳು ಒತ್ತಾಯಿಸಿದ್ದರಿಂದ ಸಮಿತಿ ರಚಿಸಲಾಗಿದೆ
ಎಂಜಿನಿಯರಿಂಗ್, ಕೃಷಿ, ಮಾಹಿತಿ ತಂತ್ರಜ್ಞಾನ, ಆಡಳಿತ ನಿರ್ವಹಣೆ, ಔಷಧ ಶಾಸ್ತ್ರ ಮತ್ತು ನರ್ಸಿಂಗ್ ಕೋರ್ಸ್ಗಳ ಶುಲ್ಕಕ್ಕೆ ಗರಿಷ್ಠ ಮಿತಿ ನಿಗದಿ ಮಾಡಲು ಹತ್ತು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಎರಡು ವರ್ಷ ಹಿಂದೆ ಈ ಸಮಿತಿ ವರದಿ ಸಲ್ಲಿಸಿತ್ತು. ಆ ಸಮಿತಿಗೂ ಕೃಷ್ಣ ಅವರೇ ಮುಖ್ಯಸ್ಥರಾಗಿದ್ದರು.
ಶುಲ್ಕದ ಕನಿಷ್ಠ ಮಿತಿಗೆ ಸಂಬಂಧಿಸಿ ಎಐಸಿಟಿಇಯ ಸ್ಪಷ್ಟ ನಿಯಮ ಇಲ್ಲದ ಕಾರಣ ಕೆಲವು ರಾಜ್ಯ ಸರ್ಕಾರಗಳು ತಮ್ಮದೇ ಆದ ಮಿತಿಯನ್ನು ಹೇರಿವೆ. ಇದನ್ನು ಪಾಲಿಸುವುದು ಸಂಸ್ಥೆಗಳಿಗೆ ಕಷ್ಟವಾದ ಕಾರಣ ಶುಲ್ಕದ ಕನಿಷ್ಠ ಮಿತಿಯನ್ನು ಶಿಫಾರಸು ಮಾಡುವ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ.
ಮೊದಲನೆಯ ಸಮಿತಿಯು ಗರಿಷ್ಠ ಶುಲ್ಕ ಮಿತಿಯನ್ನು ಮಾತ್ರ ನಿಗದಿ ಮಾಡಿತ್ತು. ತಾಂತ್ರಿಕ ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸಲು ಬಯಸುವ ಸಂಸ್ಥೆಗಳಿಗೆ ಹೆಚ್ಚಿನ ಶುಲ್ಕ ವಿಧಿಸಲು ಅವಕಾಶ ಇರಬೇಕು ಎಂದು ಹಿಂದಿನ ವರದಿಯಲ್ಲಿ ಹೇಳಲಾಗಿತ್ತು. ನಿಗದಿಪಡಿಸಲಾದ ಕನಿಷ್ಠ ಮಾನದಂಡಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳಿಗೆ ಶುಲ್ಕ ಏರಿಕೆಗೆ ಅವಕಾಶ ನೀಡಬೇಕು ಎಂದು ಆ ವರದಿಯಲ್ಲಿ ಇತ್ತು.


Click it and Unblock the Notifications











