ರಾಜ್ಯದಲ್ಲಿ ಕೊರೋನಾ ಆತಂಕದ ನಡುವೆಯೇ ನಾಳೆಯಿಂದ ದ್ವಿತೀಯ ಪರೀಕ್ಷೆಗಳು ಪ್ರಾರಂಭವಾಗಲಿದೆ. ಈ ಪರೀಕ್ಷೆಗೆ ಸುಮಾರು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೊರೋನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಈ ಹಿಂದೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಫಲಿತಾಂಶವನ್ನು ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪ್ರಕಟಮಾಡಲಾಗಿತ್ತು. ಆದರೆ ಈ ಫಲಿತಾಂಶವನ್ನು ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡುವುದಾಗಿ ಹೇಳಿತ್ತು. ಅದರಂತೆಯೇ ಇದೀಗ 18 ಸಾವಿರದ 414 ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ 17469 ಖಾಸಗಿ ವಿದ್ಯಾರ್ಥಿಗಳು, 352 ರಿಪೀಟರ್ಸ್, 5093 ಪ್ರೆಶರ್ಸ್ ವಿದ್ಯಾರ್ಥಿಗಳು ಇದ್ದಾರೆ.
ಆಗಸ್ಟ್ 19ರಿಂದ ಸೆಪ್ಟೆಂಬರ್ 3 ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಹೇಳಿದ್ದಾರೆ. ರಾಜ್ಯದ 187 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕೋವಿಡ್ ಸೋಂಕು ಇರುವ ವಿದ್ಯಾರ್ಥಿಗಳು ಈ ಕೂಡಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ RT-PCR ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಕೇರಳ ಗಡಿ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳು ಕೂಡ RT-PCR ಟೆಸ್ಟ್ನ್ನು ಕಡ್ಡಾಯವಾಗಿ ಮಾಡಿಸಿಕೊಂಡು ನೆಗೆಟಿವ್ ರಿಪೋರ್ಟ್ ತರಬೇಕಿದೆ. 72 ಗಂಟೆಗಳ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ನಿರ್ದೇಶಕಿ ಸ್ನೇಹಲ್ ಹೇಳಿದ್ದಾರೆ.
ಈ ಭಾರಿ ಪರೀಕ್ಷಾ ಕೊಠಡಿಯಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ಡೆಸ್ಕ್ನಲ್ಲಿ ಒಬ್ಬರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಇನ್ನು ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಲು ಪಿಯು ಬೋರ್ಡ್ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಮುನ್ನ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಇದುವರೆಗೆ ಪರೀಕ್ಷೆ ಬರೆಯುವ ಯಾವ ವಿದ್ಯಾರ್ಥಿಯೂ ಕೊರೋನಾ ಸೋಂಕಿನ ಕುರಿತು ಮಾಹಿತಿ ನೀಡಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಸ್ಪಷ್ಟ ಪಡಿಸಿದ್ದಾರೆ.
ಈ ಮುಂಚೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಒದಗಿತ್ತು. ದಕ್ಷಿಣ ಕನ್ನಡದ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದಿದ್ದರು. ದ್ವಿತೀಯ ಪಿಯು ಫಲಿತಾಂಶದಲ್ಲಿ ಬೆಂಗಳೂರು ದಕ್ಷಿಣ ಎರಡನೇ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣದ 302 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕಗಳು ಲಭಿಸಿವೆ. ಫಲಿತಾಂಶದಲ್ಲಿ ಬೆಂಗಳೂರು ಉತ್ತರ 3ನೇ ಸ್ಥಾನ ಪಡೆದುಕೊಂಡಿದೆ ಮತ್ತು ಅಲ್ಲಿನ 261 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ದೊರೆತಿದೆ. ಉಡುಪಿ ಜಿಲ್ಲೆಗೆ 4ನೇ ಸ್ಥಾನ ಲಭ್ಯವಾಗಿದ್ದು, ಜಿಲ್ಲೆಯ 149 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಸಿಕ್ಕಿದೆ. 5ನೇ ಸ್ಥಾನವನ್ನು ಹಾಸನ ಜಿಲ್ಲೆ ಪಡೆದುಕೊಂಡಿದ್ದು, ಅಲ್ಲಿನ 104 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ದೊರೆತಿದೆ.


Click it and Unblock the Notifications











