2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಕಲಿಕೆಯಿಂದ ಹೊರಗುಳಿಯದಂತೆ ಮಾಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಈಗಿನಿಂದಲೇ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಕರ್ನಾಟಕ ಸರ್ಕಾರ ಬುಧವಾರ ಪ್ರಕಟಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಪ್ರಕಾರ ಸಮಿತಿಯು ಮೌಲ್ಯಮಾಪನ ಮಾದರಿಗಳು, ಆನ್ಲೈನ್ ಶಿಕ್ಷಣ, ಆಫ್ಲೈನ್ ಶಿಕ್ಷಣ, ಶಿಕ್ಷಕರ ತರಬೇತಿ ವಿಧಾನ, ಬಜೆಟ್ ಸಂಪನ್ಮೂಲಗಳ ಪ್ರಾಯೋಗಿಕ ಬಳಕೆ ಹಾಗೂ ಇತರೆ ಸಂಬಂಧಿತ ವಿಷಯಗಳ ಮೇಲ್ವಿಚಾರಣೆ ನಡೆಸಲಿದೆ.
ಈ ಕುರಿತು ವಿವರಿಸಿದ ಸಚಿವರು "ಈ ಸಮಿತಿಯು ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ನಿಮ್ಹಾನ್ಸ್, ಮಕ್ಕಳ ತಜ್ಞರು ಮತ್ತು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಸದಸ್ಯರನ್ನು ಒಳಗೊಂಡಿರುತ್ತದೆ. ಅಧಿಕಾರಿಗಳು, ಪೋಷಕರ ಪ್ರತಿನಿಧಿಗಳು, ಖಾಸಗಿ ಶಾಲೆಗಳು ಮತ್ತು ಶಿಕ್ಷಕ ಸಂಘಗಳನ್ನು ಒಳಗೊಂಡಿರುತ್ತದೆ " ಎಂದಿದ್ದಾರೆ.
"ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯನ್ನು ಅಕ್ಷರ ಮತ್ತು ಮನೋಭಾವದಿಂದ ಅನುಷ್ಠಾನಗೊಳಿಸುವುದು ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.
ಕೇಡರ್ ಮತ್ತು ನೇಮಕಾತಿ ತಿದ್ದುಪಡಿಯ ಔಪಚಾರಿಕತೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಮೂಲಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆಯೇ ಮುಂಬರಲಿರುವ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಎರಡು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.