ರಾಜ್ಯದಲ್ಲಿ ಕಾನೂನು ಪದವಿ ವಿದ್ಯಾರ್ಥಿಗಳ ತೀವ್ರ ವಿರೋಧದ ನಡುವೆಯೇ ಇಂಟರ್ ಮೀಡಿಯೆಟ್ ಮತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಆಫ್ಲೈನ್ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ಕಾನೂನು ವಿದ್ಯಾರ್ಥಿಗಳ ತೀವ್ರ ವಿರೋಧದ ನಡುವೆಯೂ ಆಫ್ಲೈನ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಅವರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶೂನ್ಯವೇಳೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪನೆ ಮಾಡಿದ ಶಾಸಕ ಅಬ್ಬಯ್ಯ, "ಆಫ್ಲೈನ್ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ವಿಶ್ವವಿದ್ಯಾಲಯ ಮತ್ತು ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಳೆದ ಒಂಬತ್ತು ದಿನಗಳಿಂದ ಸಾವಿರಾರು ಕಾನೂನು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದಿದ್ದಾರೆ.
"ಆಫ್ಲೈನ್ ಪರೀಕ್ಷೆಗಳನ್ನು ನಡೆಸುವ ಬದಲು ವಿಶ್ವವಿದ್ಯಾಲಯವು ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳನ್ನು ಅವರ ಅಸೈನ್ ಮೆಂಟ್ ಅಥವಾ ಆನ್ಲೈನ್ ಪರೀಕ್ಷೆಗಳ ಮೂಲಕ ಪಾಸ್ ಮಾಡಬೇಕು. ಬೆಂಗಳೂರು ಮತ್ತು ದೆಹಲಿ ಕಾನೂನು ವಿಶ್ವವಿದ್ಯಾಲಯಗಳು ವರ್ಷದ ಇಂಟರ್ ಮೀಡಿಯೆಟ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿವೆ. ರಾಜ್ಯ ಸರ್ಕಾರವೂ ಅದನ್ನೇ ಅನುಸರಿಸಿ ವಿದ್ಯಾರ್ಥಿ ಸ್ನೇಹಿ ನಿರ್ಧಾರಗಳನ್ನು ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು, ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ನೀಡಿದ್ದೇವೆ. ಅಸೈನ್ ಮೆಂಟ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಸರ್ಕಾರ ಸಿದ್ಧವಿಲ್ಲ. ನಾವು ಸಮೀಕ್ಷೆಯನ್ನು ನಡೆಸಿದ್ದೇವೆ, 26,000 ವಿದ್ಯಾರ್ಥಿಗಳು ಆನ್ಲೈನ್ ಅಥವಾ ಆಫ್ಲೈನ್ ಪರೀಕ್ಷೆಗಳನ್ನು ಬಯಸುತ್ತಾರೆಯೇ ಎಂದು ಕೇಳಿದ್ದೇವೆ. ಅವರಲ್ಲಿ 17,000 ವಿದ್ಯಾರ್ಥಿಗಳು ಆಫ್ಲೈನ್ ಪರೀಕ್ಷೆಗಳಿಗೆ ಹಾಜರಾಗಲು ಅಥವಾ ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಆನ್ಲೈನ್ ಪರೀಕ್ಷೆಗಳನ್ನು ನಡೆಸುವ ಅಥವಾ ಅದನ್ನು ಉತ್ತೇಜಿಸುವ ಪ್ರಶ್ನೆಯೇ ಇಲ್ಲ ಮತ್ತು ಆಫ್ಲೈನ್ ಪರೀಕ್ಷೆಗಳು ನಡೆಯಲಿವೆ ಎಂದಿದ್ದಾರೆ.
"ಬಾರ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಯಾಲಯಕ್ಕೆ ಅಫಿಡವಿಟ್ನಲ್ಲಿ ಪರೀಕ್ಷೆಯ ವಿಧಾನವನ್ನು ನಿರ್ಧರಿಸುವುದು ರಾಜ್ಯದ ನಿರ್ಧಾರ ಎಂದು ಸ್ಪಷ್ಟವಾಗಿ ಹೇಳಿದೆ. ಇದರಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಆನ್ಲೈನ್ ಅಥವಾ ಆಫ್ಲೈನ್ ಪರೀಕ್ಷೆಗಳನ್ನು ಆಯೋಜಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ ಎಂದು ಹೇಳಿದೆ." ಆದರೆ ಆಫ್ಲೈನ್ ಪರೀಕ್ಷೆಗಳನ್ನು ಮಾತ್ರ ನಡೆಸಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂದು ಮಾಜಿ ಸಿಎಂ ಶೆಟ್ಟರ್ ಪ್ರಶ್ನಿಸಿದರು.
ಸರಕಾರ ಹಾಗೂ ಚುನಾಯಿತ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ವಿಚಾರವಾಗಿ ವಿಸ್ತೃತ ಚರ್ಚೆ ನಡೆಯಬೇಕಿದ್ದು, ಈ ಕುರಿತು ಇನ್ನಷ್ಟು ಚರ್ಚೆ ನಡೆಸಲಾಗುವುದು ಎಂದು ಅಧಿವೇಶನದಲ್ಲಿ ಹೇಳಿದರು.