ಕರ್ನಾಟಕ ರಾಜ್ಯ ಸರ್ಕಾರವು ಮುಂಬರುವ ದಿನಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಲು ಉದ್ದೇಶಿಸಿದೆ. ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಬೋಧನಾ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳಿಗೆ 1% ಉದ್ಯೋಗಗಳನ್ನು ಕಾಯ್ದಿರಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ಶಿಕ್ಷಣ ಇಲಾಖೆಯಲ್ಲಿ ತೃತೀಯ ಲಿಂಗ ಸಮುದಾಯದ ಅಭ್ಯರ್ಥಿಗಳು ನೇಮಕಗೊಳ್ಳುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಮುಂದಿನ ಎಲ್ಲಾ ನೇಮಕಾತಿಗಳಲ್ಲಿ ಈ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಿಗೆ 15,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಕರಡು ನಿಯಮಗಳಲ್ಲಿಯೂ ಇದನ್ನು ಪ್ರಕಟಿಸಿದೆ.
ಕರಡು ಅಧಿಸೂಚನೆಯ ಪ್ರಕಾರ ಮುಂಬರುವ ನೇಮಕಾತಿಯಲ್ಲಿ ಕನಿಷ್ಠ 150 ಹುದ್ದೆಗಳನ್ನು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಮೀಸಲಿಡಲಾಗುತ್ತದೆ. ಇಲಾಖೆಯ ಅಧಿಕಾರಿಗಳು ವಿವರಿಸಿದಂತೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಗೆ ಮಾಡಿದ ತಿದ್ದುಪಡಿಗಳನ್ನು ಆಧರಿಸಿ ನಿರ್ಧಾರವನ್ನು ಮಾಡಲಾಗಿದೆ. 202 ರಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯ ನಂತರ ತಿದ್ದುಪಡಿಗಳನ್ನು ಮಾಡಲಾಗಿದೆ.
"ನಿಯಮಗಳಿಗೆ ತಿದ್ದುಪಡಿಗಳನ್ನು ತಂದ ನಂತರ ನಾವು ಮಾಡುತ್ತಿರುವ ಮೊದಲ ನೇಮಕಾತಿ ಇದಾಗಿದೆ. ತಿದ್ದುಪಡಿಗಳು ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಯ ನಂತರ ನಾವು ತೃತೀಯ ಲಿಂಗಿ ಸಮುದಾಯಕ್ಕೆ 1% ಹುದ್ದೆಗಳನ್ನು ಕಾಯ್ದಿರಿಸುತ್ತಿದ್ದೇವೆ ಎಂದು ಇಲಾಖೆ ಆಯುಕ್ತ ಡಾ ವಿಶಾಲ್ ಆರ್ ಹೇಳಿದ್ದಾರೆ.
ಒಂದು ವೇಳೆ ಈ ಹುದ್ದೆಗಳಿಗೆ ಯಾವುದೇ ಅರ್ಜಿದಾರರು ಇಲ್ಲದಿದ್ದರೆ ಅಥವಾ 1% ಕ್ಕಿಂತ ಕಡಿಮೆ ಅರ್ಜಿಗಳು ಇದ್ದಲ್ಲಿ, ಹುದ್ದೆಗಳನ್ನು ಸ್ವಯಂಚಾಲಿತವಾಗಿ ಇತರ ವರ್ಗಗಳಿಗೆ ಪರಿವರ್ತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯು ತೃತೀಯಲಿಂಗಿಗಳಿಗೆ ಮೀಸಲಾತಿಯನ್ನು ಘೋಷಿಸಿದ್ದರೂ, ಸಮುದಾಯದ ಸದಸ್ಯರಿಗೆ ಅರ್ಹತಾ ಮಾನದಂಡದಲ್ಲಿ ಯಾವುದೇ ಸಡಿಲಿಕೆ ಸಿಗುವ ಸಾಧ್ಯತೆಯಿಲ್ಲ. "ಅವರು ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು ಮತ್ತು B.Ed ಪದವಿಗಳನ್ನು ಪಡೆದಿರಬೇಕು ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯಲ್ಲಿ ತೇರ್ಗಡೆ ಹೊಂದಿರಬೇಕು.
ಒಟ್ಟು 15,000 ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಮತ್ತು ಅವರನ್ನು ವಿವಿಧ ಸರ್ಕಾರಿ ಶಾಲೆಗಳಲ್ಲಿ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲು ನಿಯೋಜಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.