ರಾಜ್ಯದಲ್ಲಿ ಕೊರೋನಾ ಲಗ್ಗೆ ಇಟ್ಟ ಒಂದೂವರೆ ವರ್ಷದ ಬಳಿಕ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕವಾಗಿ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿದೆ.
ಈಗಾಗಲೇ 9 ರಿಂದ 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಭವಿಷ್ಯವೇನು ಎಂಬ ಯೋಚನೆ ಎಲ್ಲೆಡೆ ಮನೆಮಾಡಿತ್ತು. ಆದರೆ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಸೆಪ್ಟೆಂಬರ್ 6 ರಿಂದ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕವಾಗಿ ತರಗತಿ ನಡೆಸಲು ಅನುಮತಿ ನೀಡಲಾಗಿದೆ. ಸದ್ಯಕ್ಕೆ 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೂ ಒಂದು ತಿಂಗಳಿನವರೆಗೆ ಶಾಲೆ ಆರಂಭಿಸದಿರಲು ನಿರ್ಧರಿಸಲಾಗಿದೆ.
ವಾರದಲ್ಲಿ ಕೇವಲ 5 ದಿನ ಮಾತ್ರ, ಸೋಮವಾರದಿಂದ ಶುಕ್ರವಾರದವರೆಗೆ ಶಾಲೆ ನಡೆಯಲಿದೆ. ಈ ದಿನಗಳಲ್ಲಿ ಶೇಕಡ 50ರಷ್ಟು ಮಕ್ಕಳು ಶಾಲೆಗೆ ಪ್ರತಿ ದಿನ ಹಾಜರಾಗಬೇಕು. ಒಂದು ದಿನ ಬಿಟ್ಟು ಒಂದು ದಿನ ತರಗತಿ ನಡೆಸಲು ನಿರ್ಧರಿಸಲಾಗಿದೆ. ಆನ್ಲೈನ್ ತರಗತಿಗೆ ಹಾಜರಾದ ಇತರೆ ಶೇಕಡ.50 ರಷ್ಟು ಮಕ್ಕಳು ಮತ್ತೊಂದು ದಿನ ಭೌತಿಕ ತರಗತಿಗೆ ಹಾಜರಾಗಬೇಕು.
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇ. 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ 6, 7, 8ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಲು ಅನುಮತಿ ನೀಡಲಾಗಿದೆ. ಅಲ್ಲದೇ ವಾರದಲ್ಲಿ ಎರಡು ದಿನ ಶಾಲೆಯನ್ನು ಸ್ವಚ್ಛಗೊಳಿಸಲು, ಸ್ಯಾನಿಟೈಸ್ ಮಾಡಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ 2.61 ಲಕ್ಷ ಶಿಕ್ಷಕರಿದ್ದು, ಇದರಲ್ಲಿ 2.5 ಲಕ್ಷ ಶಿಕ್ಷಕರಿಗೆ ವ್ಯಾಕ್ಸಿನ್ ಪೂರ್ಣಗೊಂಡಿದೆ. ಅದರಲ್ಲೂ 1. 5 ಲಕ್ಷ ಶಿಕ್ಷಕರಿಗೆ ಎರಡು ಡೋಸ್ ಲಸಿಕೆ ಮುಗಿದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.