ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅವುಗಳ ವ್ಯಾಪ್ತಿಯ ನಿಗಮಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಒಟ್ಟು 22,308 ಹುದ್ದೆಗಳನ್ನು ನೇರ ಹಾಗೂ ಕೆಪಿಎಸ್ಸಿ ಮೂಲಕ ನೇಮಕ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಸತಿ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿ ನಿಲಯಗಳ ಪಾಲಕರು, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭರ್ತಿಯಾಗಲಿರುವ ಹುದ್ದೆಗಳ ವಿವರ
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ: 4122
- ಸಮಾಜ ಕಲ್ಯಾಣ ಇಲಾಖೆ: 3841
- ಹಿಂದುಳಿದ ವರ್ಗಗಳ ಕಲ್ಯಾ ಇಲಾಖೆ: 5296
- ವಸತಿ ನಿಲಯಗಳು: 5771
- ಕೆಪಿಎಸ್ಸಿ ಮೂಲಕ ನೇಮಕ: 760
ಒಟ್ಟು ಹುದ್ದೆಗಳ ನೇಮಕದ ಪೈಕಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಿಂಹಪಾಲು ಪಡೆದುಕೊಂಡಿದೆ. ಸಂಘಕ್ಕೆ ಮಂಜೂರಾಗಿರುವ 15,383 ಹುದ್ದೆಗಳಲ್ಲಿ 4,226 ಭರ್ತಿಯಾಗಿದೆ. ಈ ವರ್ಷ ಆರಂಭವಾಗಲಿರುವ ವಸತಿ ಶಾಲೆಗಳ ನೇಮಕಾತಿಯೂ ಸೇರಿ ಒಟ್ಟು 13,205 ಹುದ್ದೆ ಭರ್ತಿ ಮಾಡಲಾಗುವುದು. ಈ ಪೈಕಿ 4,122 ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ನೇಮಕಾತಿ ನಡೆಸಲು ಪ್ರಸಾವನೆ ಸಲ್ಲಿಸಲಾಗಿದ್ದು, ಈ ಕುರಿತ ಪ್ರಕ್ರಿಯೆಗಳು ಆರಂಭವಾಗಿವೆ.
ವಸತಿ ನಿಲಯಗಳಲ್ಲಿನ ಅಡುಗೆಯವರು, ಸಹಾಯಕರು, ರಾತ್ರಿ ಕಾವಲುಗಾರರು, ಸ್ವಚ್ಛತಾ ಕೆಲಸಗಾರರ 5,771 ಹುದ್ದೆಗಳನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಸಮಿತಿ ಮೂಲಕವೇ ಭರ್ತಿ ಮಾಡಲಾಗುವುದು. ಇವೆಲ್ಲವೂ ಖಾಲಿ ಇರುವ ಹುದ್ದೆಗಳು. ಸದ್ಯ ಗುತ್ತಿಗೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊಸ ನೇಮಕದಿಂದ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಾಜ ಕಲ್ಯಾಣ ಮತ್ತು ಪ. ವರ್ಗ: ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆಯಲ್ಲಿ ಮಂಜೂರಾಗಿರುವ 16,312 ಹುದ್ದೆಗಳ ಪೈಕಿ 7,348 ಭರ್ತಿ ಮಾಡಲಾಗಿದೆ. ಖಾಲಿಯಿರುವ 8,964ರಲ್ಲಿ 3,841 ಹುದ್ದೆಗೆ ಭರ್ತಿಗೆ ಪ್ರಕ್ರಿಯೆ ಆರಂಭವಾಗಿದೆ. ಇಲಾಖೆಯ 760 ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ನೇಮಕ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶಿಷ್ಠ ಕಲ್ಯಾಣ ಇಲಾಖೆಯಲ್ಲಿ 948 ಹುದ್ದೆಗಳನ್ನು ಕೆಪಿಎಸ್ಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮತ್ತು ಇಲಾಖಾ ಹಂತದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಗೆ ಒಟ್ಟು 2,500 ಹುದ್ದೆ ಮಂಜೂರಾಗಿದ್ದು, 752 ಭರ್ತಿಮಾಡಲಾಗಿದೆ. 1,748 ಖಾಲಿ ಉಳಿದಿವೆ ಎಂಬ ಮಾಹಿತಿ ನೀಡಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವಿವಿಧ ವೃಂದಗಳ 5,296 ಹುದ್ದೆ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಇಲಾಖೆಗೆ ಮಂಜೂರಾಗಿರುವ 13,871 ಹುದ್ದೆ ಪೈಕಿ 5,358 ಭರ್ತಿಯಾಗಿವೆ. 8,513 ಹುದ್ದೆಗಳು ಖಾಲಿ ಉಳಿದಿವೆ ಎಂದು ಸಚಿವರು ಹೇಳಿದ್ದಾರೆ.
'ಡಿ' ದರ್ಜೆ ಹುದ್ದೆಗಳ ನೇಮಕಾತಿಗೆ ಎಸ್ಎಸ್ಎಲ್ಸಿ ಉತ್ತೀರ್ಣ ಆಗಿರುವು ದನ್ನು ಕಡ್ಡಾಯ ಮಾಡಲಾಗಿದೆ. ಹಿಂದೆ 7ನೇ ತರಗತಿ ಪಾಸಾಗಿದ್ದರೆ ಸಾಕು ಎಂದಿತ್ತು. ಅನೇಕರು ನಕಲಿ ಪ್ರಮಾಣ ಪತಗಳನ್ನು ನೀಡಿದ್ದರು. ಅಕ್ರಮಕ್ಕೆ ದಾರಿಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಿದೆ. ಅದನ್ನೇ ಇಲ್ಲಿಯೂ ಅನುಸರಿಸಲಾಗುವುದು ಎಂದು ಹೇಳಿದ್ದಾರೆ.
ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ(ಸಿಇಒ) ನೇತೃತ್ವದ ಸಮಿತಿಯ ಮೂಲಕ ಪಾರದರ್ಶಕವಾಗಿ ನೇರ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.