ಇಂದಿನಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿವೆ. ಮೊದಲ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಯು ಬೆಳಿಗ್ಗೆ 9 :30 ರಿಂದ ಮಧ್ಯಹ್ನಾ 12 :30 ರವರೆಗೆ ನಡೆಯಲಿದ್ದು ಈ ಬಾರಿ ಒಟ್ಟು 8,77,174 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.
ಪರೀಕ್ಷಾ ಕೇಂದ್ರಗಳು
ಎಸ್ಸೆಸ್ಸೆಲ್ಸಿ ಪರೀಕ್ಷೆ 2,770 ಕೇಂದ್ರಗಳಲ್ಲಿ ನಡೆಯಲಿದ್ದು, 72 ಸೂಕ್ಷ್ಮ ಮತ್ತು 17 ಅತೀ ಸೂಕ್ಷ್ಮ ಕೇಂದ್ರಗಳಾಗಿವೆ.
ಕಡಿಮೆ ಪರೀಕ್ಷಾ ಕೇಂದ್ರಗಳು
ಕಳೆದ ಸಾಲಿಗೆ ಹೋಲಿಸಿದರೆ 310 ಕೇಂದ್ರಗಳು ಕಡಿಮೆಯಾಗಿವೆ. ಕಳೆದ ವರ್ಷ 3,082 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಕಡಿಮೆ ಮಕ್ಕಳಿರುವ ಕೇಂದ್ರಗಳನ್ನು ಭದ್ರತೆ ದೃಷ್ಟಿಯಿಂದ ಸಮೀಪದ ಕೇಂದ್ರಗಳಲ್ಲಿ ವಿಲೀನ ಮಾಡಲಾಗಿದೆ.
ಅಕ್ರಮ ತಡೆಯಲು ಸಿ ಸಿ ಟಿ ವಿ
ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರ ವಹಿಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ 40 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 30 ಜಿಲ್ಲಾ ಖಜಾನೆಗಳು ಮತ್ತು ನಾಲ್ಕು ಉಪ ಖಜಾನೆಗಳ ಚಟುವಟಿಕೆಗಳನ್ನು ಪರೀಕ್ಷಾ ಮಂಡಳಿ ಕಚೇರಿಯಿಂದಲೇ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
1,184 ಪರೀಕ್ಷಾ ಕೇಂದ್ರಗಳ ಕೊಠಡಿಗಳು ಮತ್ತು 1,361 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೇಂದ್ರಕ್ಕೆ ಮೊಬೈಲ್ ಫೋನ್, ಕ್ಯಾಲುಕ್ಯುಲೇಟರ್, ಚೀಟಿ, ಪಠ್ಯ ಪುಸ್ತಕಗಳು, ಗೈಡ್ಗಳನ್ನು ತರದಂತೆ ನಿಷೇಧಿಸಲಾಗಿದೆ.
ಬಿಗಿ ಭದ್ರತೆ
ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಜಾಗೃತ ದಳವನ್ನು ನೇಮಿಸಲಾಗಿದ್ದು, ರಾಜ್ಯ ಮತ್ತು ವಿಭಾಗ ಮಟ್ಟದ 19 ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಎಲ್ಲ ಜಿಲ್ಲೆಗಳ ಡಯಟ್ ಪ್ರಾಂಶುಪಾಲರನ್ನು ಜಿಲ್ಲಾ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪ್ರೌಢಶಾಲಾ ಸಹ ಶಿಕ್ಷಕರನ್ನು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸ್ಥಾನಿಕ ಜಾಗೃತ ದಳದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ಸಮನ್ವಯಾಧಿಕಾರಿಗಳ ವಿಚಕ್ಷಣಾ ದಳ ರಚಿಸಲಾಗಿದೆ.
ಬಸ್ಗಳಲ್ಲಿ ಉಚಿತ ಪ್ರಯಾಣ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಹಾಯವಾಣಿ
ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಥವಾ ಗೊಂದಲಗಳ ನಿವಾರಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಸಂಖ್ಯೆ- (080-23310075, 080-23310076). ಪರೀಕ್ಷೆ ನಡೆಯುವ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30ರವರೆಗೆ ಇದು ಕಾರ್ಯ ನಿರ್ವಹಿಸಲಿದೆ.
15 ನಿಮಿಷ ವಿನಾಯಿತಿ
ವಿದ್ಯಾರ್ಥಿಗಳು ಬೆಳಿಗ್ಗೆ 9.15ರಿಂದ 9.30ರೊಳಗೆ ಪರೀಕ್ಷಾ ಕೊಠಡಿಗೆ ಹಾಜರಾಗಲು ಸಮಯಾವಕಾಶ ನಿಗದಿ ಮಾಡಲಾಗಿದೆ. 9.30ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ನಂತರ ಬಂದವರಿಗೆ ಪ್ರವೇಶ ನಿಷೇಧಿಸಲು ತೀರ್ಮಾನಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 9.45ರೊಳಗೆ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗುತ್ತದೆ.
ಆ ನಂತರ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಇಲ್ಲ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನು ಗಮನಿಸಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳಾಪಟ್ಟಿ