ಇದೇ ಮೊದಲ ಬಾರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳ ನೇರ ನೇಮಕಕ್ಕೆ ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಈ ಮೂಲಕ ಕ್ರೀಡಾಪಟುಗಳಿಗೆ ರಾಜ್ಯ ಪೊಲೀಸ್ ಇಲಾಖೆ ಖಾಕಿ ಭಾಗ್ಯ ಕಲ್ಪಿಸಲಿದೆ.
ಶೇ.100 ಮೀಸಲಾತಿ ನೀಡಿ ಕ್ರೀಡಾಪಟುಗಳನ್ನು ನೇಮಕ ಮಾಡಿಕೊಳ್ಳುವ ಖಾಕಿ ಭಾಗ್ಯಕ್ಕೆ ಪೊಲೀಸ್ ಇಲಾಖೆಯು ಸರ್ಕಾರದ ಅನುಮೋದನೆಗೆ ಕಾಯುತ್ತಿದ್ದು, ಅಧಿಕೃತ ಮುದ್ರೆ ಬಿದ್ದ ತಕ್ಷಣ ನೇಮಕ ಪ್ರಕ್ರಿಯೆ ಶುರುವಾಗಲಿದೆ.
ಇಲಾಖೆಯಲ್ಲಿ ಪ್ರಸ್ತುತ ಕ್ರೀಡಾ ಖೋಟಾದಡಿ ಶೇ.2 ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರಲ್ಲಿ ಕ್ರೀಡಾ ಮನೋಭಾವ ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಕ್ರೀಡಾಪಟುಗಳ ನೇರ ನೇಮಕಾತಿಗೆ ಇಲಾಖೆ ತೀರ್ಮಾನಿಸಿದೆ. ನೇಮಕಾತಿಯಲ್ಲಿ ಶೇ.100 ಮೀಸಲಾತಿ ಕ್ರೀಡಾಪಟುಗಳಿಗೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳು ಒಲವು ತೋರಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಹೊಸ ಪದ್ಧತಿ ಜಾರಿಗೆ ಸರ್ಕಾರ ಕೂಡ ಮೌಖಿಕ ಒಪ್ಪಿಗೆ ನೀಡಿದೆ. ಈ ಸಂಬಂಧ ಶೀಘ್ರದಲ್ಲೇ ಲಿಖಿತ ಆದೇಶ ಹೊರಬೀಳಲಿದೆ.
ಕೆಎಸ್ಆರ್ಪಿಯಲ್ಲಿ ಅವಕಾಶ
ಪ್ರಾಥಮಿಕ ಹಂತವಾಗಿ ಸಿವಿಲ್ ಪೊಲೀಸ್ ಘಟಕಕ್ಕಿಂತ ಪ್ರತಿಭಟನೆ, ಬಂದ್, ಕೋಮುಗಲಭೆ ಉಂಟಾದ ಸಂದರ್ಭ ಮಹತ್ವದ ಪಾತ್ರ ನಿರ್ವಹಿಸುವ ರಾಜ್ಯ ಸಶಸ್ತ್ರ ಮೀಸಲು ಪಡೆಗೆ(ಕೆಎಸ್ಸಾರ್ಪಿ)ಕ್ರೀಡಾಪಟುಗಳನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳಲು ಇಲಾಖೆ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಘಟಕಗಳಿಗೂ ನೇಮಕ ಮಾಡುವ ಬಗ್ಗೆ ಯೋಜನೆ ರೂಪಿಸಿಕೊಂಡಿದೆ.
ಕೆಎಸ್ಸಾರ್ಪಿ ಘಟಕದ ಸಿಬ್ಬಂದಿ ಒಟ್ಟಾರೆ ನೇಮಕಾತಿಯಲ್ಲಿ ಇನ್ಮುಂದೆ ಶೇ.100 ಭಾಗದಲ್ಲಿ ಕ್ರೀಡಾಪಟುಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಇಲಾಖೆ ಚಿಂತನೆ ನಡೆಸಿದೆ. ಕೆಎಸ್ಸಾರ್ಪಿ ಸಿಬ್ಬಂದಿ ಬಹುತೇಕ ತುರ್ತು ಪರಿಸ್ಥಿತಿಗಳಲ್ಲೇ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಕ್ರೀಡಾಪಟುಗಳು ಸೇವೆಗೆ ಬಂದರೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ರಾಜ್ಯದಲ್ಲಿ 15 ಕೆಎಸ್ಆರ್ಪಿ ಬೆಟಾಲಿಯನ್ಗಳಿವೆ. ಬೆಂಗಳೂರಲ್ಲಿ 4 ಬೆಟಾಲಿಯನ್ ಇದ್ದು, ಉಳಿದವು ಮೈಸೂರು, ಹಾಸನ, ಬೆಳಗಾವಿ, ಕಲಬುರಗಿ, ಮಂಗಳೂರು ಮತ್ತು ಶಿವಮೊಗ್ಗದಲ್ಲಿವೆ. ಪ್ರತಿ ಬೆಟಾಲಿಯನ್ನಲ್ಲಿ 1200 ಸಿಬ್ಬಂದಿ ಇದ್ದಾರೆ. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಮಹಿಳಾ ಕೆಎಸ್ಸಾರ್ಪಿ ಬೆಟಾಲಿಯನ್ ಸಹ ಆರಂಭಿಸಲಾಗಿದೆ. ಒಟ್ಟಾರೆ ಕೆಎಸ್ಸಾರ್ಪಿಯಲ್ಲಿ ಪ್ರಸ್ತುತ 15 ಸಾವಿರ ಸಿಬ್ಬಂದಿ ಇದ್ದಾರೆ. ಇವರಲ್ಲಿ ಬಹುತೇಕ ಮಂದಿ ನಿವೃತ್ತಿ ಹಂತದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕ್ರೀಡಾಪಟುಗಳ ನೇಮಕವಾದರೆ ಹೊಸ ಹುರುಪು ಬರಲಿದೆ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ.
ನೇಮಕಾತಿಗೆ ಪ್ರತ್ಯೇಕ ನಿಯಮಾವಳಿ
ನೇರ ನೇಮಕಾತಿ ಪದ್ಧತಿ ಜಾರಿಯಾದರೆ ಓಬಿಸಿ, ಜನರಲ್, ಎಸ್ಸಿ-ಎಸ್ಟಿ, ಪುರುಷ, ಮಹಿಳೆಯರಿಗೆ ನೇಮಕಾತಿ ವೇಳೆ ಮೀಸಲಾತಿ ಒದಗಿಸುವಂತೆ ಕ್ರೀಡಾಪಟುಗಳಿಗೂ ಪ್ರತ್ಯೇಕ ಮೀಸಲಾತಿ ಇರಲಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ನೇಮಕಾತಿಗೆ ವಿಧಿಸಬೇಕಾದ ಷರತ್ತು ಹಾಗೂ ನಿಯಮಾವಳಿಗಳನ್ನು ಪೊಲೀಸ್ ಇಲಾಖೆ ರೂಪಿಸಲಿದೆ.
ಪೊಲೀಸ್ ಸಿಬ್ಬಂದಿಗೆ ಪ್ರೋತ್ಸಾಹಧನ
ಪೊಲೀಸರಲ್ಲಿ ಕ್ರೀಡಾ ಸ್ಪೂರ್ತಿ ಹೆಚ್ಚಿಸಲು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ತಯಾರಿ ನೀಡಲು ಇಲಾಖೆ ಸಿದ್ಧತೆ ನಡೆಸಿದೆ. ಅಲ್ಲದೆ, ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಅಭ್ಯರ್ಥಿಗೆ ಪ್ರಶಸ್ತಿ ಗೆಲ್ಲಲು ಉತ್ತೇಜನ ನೀಡಲು ಸರ್ಕಾರದಿಂದ 25 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸಿದೆ.