ಸಿನಿಮಾಗಳಲ್ಲಿ ವೈರ್ಲೆಸ್ ತಂತ್ರಜ್ಞಾನ ಬಳಸಿ ಕಾಪಿ ಹೊಡೆಯುವುದನ್ನು ನೋಡಿದ್ದೇವೆ, ಆದರೆ ಅದನ್ನು ನಿಜವಾಗಿ ಪ್ರಯೋಗಿಸಿ ಸಿಕ್ಕಿಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮುರಾರ್ಜಿ ದೇಸಾಯಿ ವಸತಿಶಾಲೆಯ ದೈಹಿಕ ಶಿಕ್ಷಕರ ನೇಮಕಾತಿಗೆ ಇಲ್ಲಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಉದ್ಯೋಗದ ಆಸೆಯಿಂದ ವೈರ್ಲೆಸ್ ತಂತ್ರಜ್ಞಾನ ಬಳಸಿ ಅಕ್ರಮ ಎಸಗಿದ 3 ಜನ ಅಭ್ಯರ್ಥಿಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕು ಬೆಳಲಗೆರೆ ಗ್ರಾಮದ ಡಿ. ಶ್ರೀನಿವಾಸ, ದಾವಣಗೆರೆ ತಾಲೂಕು ಓಬಜ್ಜಿಹಳ್ಳಿಯ ಒ.ಸುಭಾಷ್, ಚನ್ನಗಿರಿ ತಾಲೂಕು ಮಿಯಾಪುರದ ಆರ್. ತಿಪ್ಪೇಶ ನಾಯ್ಕ ಬಂಧಿತರು. ನೂತನ್ ಕಾಲೇಜಿನಲ್ಲಿ ಇಬ್ಬರು, ಮಿಲ್ಲತ್ ಕಾಲೇಜಿನಲ್ಲಿ ಮತ್ತೊಬ್ಬ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾರೆ.
ಸೋಮವಾರ ಮೆಥಡಾಲಜಿ ವಿಷಯದ ಪರೀಕ್ಷೆಯಿತ್ತು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅವರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ. ಕೂಡಲೇ ದಾಳಿ ನಡೆಸಿದಾಗ ವಿವರಗಳು ಬೆಳಕಿಗೆ ಬಂದಿವೆ.
ಅಭ್ಯರ್ಥಿಗಳು ಕಿವಿಯೊಳಗೆ ರಿಸೀವರ್ ಅಳವಡಿಸಿಕೊಂಡಿದ್ದರು. ಧರಿಸಿದ ಕಪ್ಪು ಬನಿಯನ್ಗೆ ಸಿಮ್ ಹೊಂದಿರುವ ಉಪಕರಣ ಜೋಡಿಸಲಾಗಿತ್ತು. ಪ್ರದೀಪ್ ಎಂಬಾತ ನಗರದ ಲಾಡ್ಜ್ ಒಂದರಲ್ಲಿ ಕುಳಿತು ಪ್ರಶ್ನೆಗಳನ್ನು ಕೇಳುತ್ತ ಉತ್ತರ ಹೇಳುತ್ತಿದ್ದ. ಇದೇ ರೀತಿ ಅವರು ಭಾನುವಾರ ಸಾಮಾನ್ಯ ಜ್ಞಾನ ವಿಷಯದ ಪರೀಕ್ಷೆ ಬರೆದಿದ್ದರು.
ಮೂರು ಜನ ಆರೋಪಿಗಳು ಸಿಕ್ಕಿದ್ದಾರೆ. ಕೆಪಿಎಸ್ಸಿ ಕಾರ್ಯದರ್ಶಿ ಸೂಚನೆಯಂತೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದ್ದಾರೆ.