ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಮಾದರಿ ಉತ್ತರ ಪ್ರಕಟಿಸಿದೆ.
ಆಯೋಗದ ವೆಬ್ಸೈಟ್ ನಲ್ಲಿ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಆ.28 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಆಕ್ಷೇಪಣೆ ಸಲ್ಲಿಕೆ
ಆಕ್ಷೇಪಣೆ ಸಲ್ಲಿಸುವವರು ಆಯೋಗದ ವೆಬ್ಸೈಟ್ ನಲ್ಲಿ ಸೂಚಿಸಿರುವ ನಮೂನೆಯ ಮೂಲಕ ಸಲ್ಲಿಸತಕ್ಕದ್ದು.
ಆಕ್ಷೇಪಣೆಗೆ ಅಗತ್ಯವಿರುವ ಸೂಕ್ತ ದಾಖಲೆ ಒದಗಿಸತಕ್ಕದ್ದು.
ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ
ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001

ಭಾನುವಾರ ನಡೆದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ರಾಜ್ಯದ 547 ಪರೀಕ್ಷೆ ಕೇಂದ್ರಗಳಲ್ಲಿ 2,31,374 ಅಭ್ಯರ್ಥಿಗಳು ಅರ್ಹರಾಗಿದ್ದು, ಮೊದಲ ಪತ್ರಿಕೆಗೆ 1,33,291(ಶೇ.57.61) ಹಾಗೂ ಎರಡನೇ ಪತ್ರಿಕೆಗೆ 1,31,123(ಶೇ.56.67) ಅಭ್ಯರ್ಥಿಗಳು ಹಾಜರಾಗಿದ್ದರು.
ಈ ಬಾರಿಯ ಪರೀಕ್ಷೆಯಲ್ಲಿ ಉತ್ತರ ಬರೆಯಲು ವಿಶೇಷ ಓಎಂಆರ್ ಪ್ರತಿಯನ್ನು ಕೆಪಿಎಸ್ಸಿ ಬಳಸಲಾಗಿತ್ತು. ಪ್ರತಿ ಒಎಂಆರ್ ಪ್ರತಿಗೆ 3.50 ರೂ.ಗಳನ್ನು ಖರ್ಚು ಮಾಡಿ, ಪ್ರತಿಯೊಬ್ಬ ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ ಸೇರಿ ಇತರ ಮಾಹಿತಿಯನ್ನು ಮೊದಲೇ ಓಎಂಆರ್ ಪ್ರತಿಯಲ್ಲಿ ಕೋಡಿಂಗ್ ಮಾಡಿ ಅಭ್ಯರ್ಥಿಗಳಿಗೆ ನೀಡಲಾಗಿತ್ತು.
ಶೀಘ್ರ ಫಲಿತಾಂಶ
ನೂತನ ಉತ್ತರ ಪತ್ರಿಕೆಗಳಿಂದ ಮೌಲ್ಯಮಾಪನ ಹಾಗೂ ಅಂಕ ಎಣಿಕೆ ಸುಲಭವಾಗಲಿದೆ. ಇದರಿಂದ ಉತ್ತರ ಪ್ರತಿ ಪ್ರಕಟಿಸಿದ 15-17 ದಿನಗಳಲ್ಲಿ ಫಲಿತಾಂಶವನ್ನು ಕಡ್ಡಾಯವಾಗಿ ನಿಡುತ್ತೇವೆ. ನವೆಂಬರ್ ಒಳಗೆ ಮುಖ್ಯ ಪರೀಕ್ಷೆಯನ್ನು ಕೂಡ ನಡೆಸಲಾಗುವುದು ಎಂದು ಕೆಪಿಎಸ್ಸಿ ಕಾರ್ಯದರ್ಶಿ ಪ್ರಸನ್ನಕುಮಾರ್ ಅವರು ತಿಳಿಸಿದ್ದಾರೆ.
ಉತ್ತರಕ್ಕೆ ಆಕ್ಷೇಪಣೆ ಸ್ವೀಕರಿಸಿದ ಕೂಡಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ಆಕ್ಷೇಪಣೆ ಸ್ವೀಕರಿಸುವ ಅವಧಿಯಲ್ಲೇ ಎಲ್ಲ ಉತ್ತರ ಪ್ರತಿಗಳನ್ನು ಕೆಪಿಎಸ್ಸಿ ಸ್ಕ್ಯಾನ್ ಮಾಡಿಟ್ಟುಕೊಳ್ಳಲಿದೆ.
ಕಡಿಮೆ ಹಾಜರಾತಿ
ಭಾನುವಾರ ಎರಡು ಪತ್ರಿಕೆಗಳಿಗೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಹಾಜರಿ ಗಣನೀಯವಾಗಿ ಕುಸಿದಿರುವುದು ಗಮನಕ್ಕೆ ಬಂದಿದೆ. ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿರುವುದು ಅಭ್ಯರ್ಥಿಗಳ ಹಾಜರಾತಿ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಕೆಪಿಎಸ್ಸಿ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications











