ರಾಜ್ಯದ ಉಪ ವಿಭಾಗ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ತಹಸೀಲ್ದಾರ್ ಮತ್ತು ಸಹಾಯಕ ಆಯುಕ್ತರ ಕೊರತೆ ಇದ್ದು, ಸರ್ಕಾರದ ಆಡಳಿತದ ಮೇಲೆ ಇದು ಅಡ್ಡ ಪರಿಣಾಮ ಬೀರಲಿದೆ ಎಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಹತ್ತಿರದಲ್ಲಿದ್ದು ಕೆಲಸ ಮಾಡಬೇಕಿರುವ ಸಹಾಯಕ ಆಯುಕ್ತ ಮತ್ತು ತಹಸೀಲ್ದಾರ್ ಗಳ ಕೊರತೆ ಎದ್ದು ಕಾಣುತ್ತಿದೆ. ಸುಮಾರು 200 ತಹಸೀಲ್ದಾರ್ ಹುದ್ದೆಗಳು ಭರ್ತಿಯಾಗಬೇಕಿದ್ದು, ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯುವಂತೆ ಡಿಪಿಎಆರ್ ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
2011 ಹಾಗೂ 2014 ರಲ್ಲಿ ನಡೆದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಇನ್ನೂ ನೇಮಕಾತಿ ಮಾಡಿಕೊಳ್ಳಲಾಗಿಲ್ಲ. ಇದರಿಂದಾಗಿ ಅಧಿಕಾರಿಗಳ ಕೊರತೆ ಹೆಚ್ಚಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಗ್ರೇಡ್ 1 ಮತ್ತು ಗ್ರೇಡ್ 2 ಎಂಬ ತಹಸೀಲ್ದಾರ್ ಹುದ್ದೆಗಳಿದ್ದು, ಅವುಗಳಿಗೆ ಸರಿಯಾಗಿ ನೇಮಕಾತಿಯೇ ನಡೆದಿಲ್ಲ ಎಂದು ಅವರು ಹೇಳಿದರು.
ಕೆಪಿಎಸ್ಸಿಯ 2011 ರ ನೇಮಕಾತಿ ಪೂರ್ಣಗೊಂಡಿದ್ದಿದ್ದರೇ 58 ತಹಸೀಲ್ದಾರ್ ಹುದ್ದೆಗಳು ಭರ್ತಿಯಾಗುತ್ತಿದ್ದವು. 2011ರಲ್ಲಿ ಒಟ್ಟಾರೆ 362 ಜನರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಇಡಿ ಸಿಐಡಿ ತನಿಖೆ, ಕೆಎಟಿಗಳಿಗೆ ಹೋಗಿ ಇನ್ನೂ ಹೈಕೋರ್ಟ್ ವಿಚಾರಣೆಯಲ್ಲಿದೆ. 2014 ರಲ್ಲಿ 464 ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ಆಯ್ಕೆಯಾದವರು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಈ ಹಿಂದೆ ಕಂದಾಯ ಇಲಾಖೆ ತಹಸೀಲ್ದಾರ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿತ್ತು. ಆದರೆ ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ. ಈ ಬಾರಿಯು ಲೋಕಸೇವಾ ಆಯೋಗದಿಂದಲೇ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಿದೆ.