ಇತ್ತೀಚಿಗಷ್ಟೇ ಪಂಜಾಬಿನಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಹಿಳೆಯರಿಗೆ ಉಚಿತ ಶಿಕ್ಷಣವನ್ನು ಘೋಷಿಸಿತ್ತು, ಈಗ ಮಧ್ಯಪ್ರದೇಶದ ಸರ್ಕಾರ ಇದೇ ರೀತಿಯ ಘೋಷಣೆಯೊಂದನ್ನು ಹೊರಡಿಸಿದೆ.
ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹೊಣೆಯನ್ನು ಸರ್ಕಾರವೇ ಭರಿಸುವುದಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
12ನೇ ತರಗತಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಅಲ್ಲದೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸುಗಳ ಶುಲ್ಕವನ್ನು ಕೂಡ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿರುವ ಚೌಹಾಣ್, ಅರಣ್ಯ ಇಲಾಖೆ ಹೊರತು ಪಡಿಸಿ ಸರ್ಕಾರದ ಉಳಿದೆಲ್ಲ ವಿಭಾಗಗಳಲ್ಲೂ ಮಹಿಳೆಯರಿಗೆ ಶೇ. 33 ಮೀಸಲು ಘೋಷಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ವರ್ಷ ಬಾಕಿ ಇರುವಂತೆಯೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶಿಕ್ಷಣ ವ್ಯವಸ್ಥೆ ಸುಧಾರಣೆ ಹಾಗೂ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಘೋಷಣೆಗಳನ್ನು ಹೊರಡಿಸಿದ್ದಾರೆ.
ಬಹುಕೋಟಿ ವ್ಯಾಪಂ ಹಗರಣದಲ್ಲಿ ಹರಾಜಾದ ರಾಜ್ಯದ ಶಿಕ್ಷಣ ಇಲಾಖೆಯ ಗೌರವ, ಪ್ರತಿಷ್ಠೆಯನ್ನು ಮರಳಿ ತರಲು ಪಣತೊಟ್ಟಿರುವ ಸಿಎಂ ಚೌಹಾಣ್, ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕಗಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶುಲ್ಕವನ್ನೂ ಭರಿಸುವ ಭರವಸೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಾಲ್ಗೊಂಡಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ತೊಂದರೆಯಿಂದಾಗಿಯೇ ರಾಜ್ಯದಲ್ಲಿ ಹಲವರು 12ನೇ ತರಗತಿ ಬಳಿಕ ಶಿಕ್ಷಣ ತೊರೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಇದನ್ನು ಗಮನಿಸಿ: ಅಮೆರಿಕ ವಿವಿಯಲ್ಲಿ ರಾಮಾಯಣ-ಮಹಾಭಾರತ ಅಧ್ಯಯನ
ದೇಶದಲ್ಲಿ ಈಗ ರಾಜಕೀಯ ವ್ಯವಸ್ಥೆ ಬಹಳಷ್ಟು ಬದಲಾಗುತ್ತಿದ್ದು, ಮುಂದಿನ ಚುನಾವಣೆಗೆ ಪಕ್ಷಗಳು ಇನ್ನಿಲ್ಲದ ತಯಾರಿ ನಡೆಸುತ್ತಿವೆ. ಒಟ್ಟಿನಲ್ಲಿ ರಾಜಕೀಯ ಪೈಪೋಟಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಳಿತಾಗುತ್ತಿದ್ದು, ಶಿಕ್ಷಣದಿಂದ ವಂಚಿತರಾದವರಿಗೆ ಇದು ವರದಾನವಾಗಿದೆ.