ನವೆಂಬರ್ 7 ನ್ನು 'ವಿದ್ಯಾರ್ಥಿಗಳ ದಿನ'ಎಂದು ಆಚರಿಸಲು ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದಲ್ಲಿನ ಶಾಲೆ-ಕಾಲೇಜುಗಳಿಗೆ ಕರೆ ನೀಡಿದೆ.
ನವೆಂಬರ್ 7, 1900 ರಂದು ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಶಾಲೆಗೆ ಸೇರಿದ್ದ ದಿನವಾಗಿದ್ದು, ಅದರ ನೆನಪಿಗಾಗಿ ಆಚರಿಸಲಾಗುತ್ತಿದೆ.

ಡಾ.ಅಂಬೇಡ್ಕರ್ ನವೆಂಬರ್ 7, 1900 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರತಾಪ್ ಸಿಂಗ್ ಪ್ರೌಢ ಶಾಲೆಗೆ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು. ಅವರು ಶಾಲೆಯ ದಾಖಲಾತಿಯಲ್ಲಿ '1914' ಎಂಬ ರೋಲ್ ನಂಬರ್ ಪಡೆದಿದ್ದರು. ಅವರು ಸಹಿ ಮಾಡಿದ್ದ ಆ ದಾಖಲಾತಿ ಪತ್ರವನ್ನು ಶಾಲೆಯವರು ಇಂದಿಗೂ ಐತಿಹಾಸಿಕ ದಾಖಲೆ ಎಂದು ಪರಿಗಣಿಸಿ ಕಾಪಾಡಿಕೊಂಡು ಬಂದಿದ್ದಾರೆ.
117 ವರ್ಷಗಳ ಹಿಂದೆ ಡಾ.ಬಿ ಆರ್ ಅಂಬೇಡ್ಕರ್ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು. ಈ ನಿಟ್ಟಿನಲ್ಲಿ ಅ. 27 ರಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯಿಂದ ಹೊರಡಿಸಲಾದ ಸರ್ಕಾರದ ನಿರ್ಣಯ (ಜಿಆರ್) ದಲ್ಲಿ ಅಂಬೇಡ್ಕರ್ ಶಾಲಾ ವಿದ್ಯಾಭ್ಯಾಸ ಪ್ರಾರಂಭದೊಡನೆ ಹೊಸ ಯುಗವೊಂದು ಪ್ರಾರಂಭವಾಗಿತ್ತು ಎಂದು ಬಣ್ಣಿಸಲಾಗಿದೆ. ಡಾ ಅಂಬೇಡ್ಕರ್ ರಾಷ್ಟ್ರಕ್ಕೆ ನೀಡಿದ ಸಂವಿಧಾನದ ಕಾರಣ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಕಾನೂನಿನ ಮೌಲ್ಯಗಳು ಇಂದು ಸಮಾಜದಲ್ಲಿ ಬೇರೂರಿವೆ ಎಂದು ನಿರ್ಣಯದಲ್ಲಿ ವಿವರಿಸಿದೆ.
" ಡಾ. ಬಿ.ಆರ್.ಅಂಬೇಡ್ಕರ್ ಅವರು ಶಾಲೆಯಲ್ಲಿ ವಿದ್ಯಾರ್ಥಿಯಾಗಿ ದಾಖಲಾಗಿದ್ದು, ಇದು ಒಂದು ಐತಿಹಾಸಿಕ ಘಟನೆ ಮತ್ತು ಭಾರತದ ಇತಿಹಾಸದ ದಿಕ್ಕನ್ನು ಬದಲಿಸಿದೆ. ಡಾ. ಅಂಬೇಡ್ಕರ್ ಅವರು ಜೀವಮಾನದ ಪರ್ಯಂತ ವಿದ್ಯಾರ್ಥಿಯಾಗಿದ್ದರು ಮತ್ತು ಅವರ ಜೀವನದುದ್ದಕ್ಕೂ ಕಲಿಕಾ ಆಸಕ್ತಿ ತಾಳಿದ್ದರು"
"ಪ್ರತಿ ವಿದ್ಯಾರ್ಥಿ ಯೂ ದೇಶದ ಭವಿಷ್ಯ ಮತ್ತು ಶಿಕ್ಷಣ ಮಾತ್ರ ಪ್ರಗತಿಗೆ ಸಾಧನ ಆಗಿದೆ, ಎಲ್ಲಾ ಶಾಲೆಗಳು ಮತ್ತು ಜೂನಿಯರ್ ಕಾಲೇಜುಗಳು ಪ್ರಬಂಧ ಬರವಣಿಗೆ, ಚರ್ಚಾ ಸ್ಪರ್ಧೆಗಳು, ಕವಿತೆ ಓದುವಿಕೆ ಮತ್ತಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಬೇಕು "ಎಂದು ನಿರ್ಣಯದಲ್ಲಿ ಹೇಳಲಾಗಿದೆ.


Click it and Unblock the Notifications











