ಇತ್ತೀಚೆಗೆ ಎಲೆಕ್ಷನ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಉತ್ತರ ಪ್ರದೇಶ ಇದೀಗ ಹತ್ತನೇ ತರಗತಿ ಪರೀಕ್ಷೆ ಮೂಲಕ ಮತ್ತೆ ದೇಶದ ಜನರ ಗಮನ ಸೆಳೆದಿದೆ.
ಪರೀಕ್ಷಾ ಕೇಂದ್ರದ ಕಿಟಕಿ ಮೂಲಕ ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಡುವ ಮತ್ತು ಪತ್ರಿಕೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರ ಇರುವ ಚೀಟಿಯನ್ನು ಒಳಗೆ ಬಿಸಾಡಲಾಗುತ್ತಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಫರಾಹ್ ಪ್ರದೇಶದ ಶ್ಯಾಮ್ ಲಾಲ್ ಪರೀಕ್ಷಾ ಕೇಂದ್ರದಲ್ಲಿ ಮಾಸ್ ಕಾಪಿಯ ಘಟನೆಯು ನಡೆದಿದ್ದು ಇಡೀ ದೇಶವೇ ಆಶ್ಚರ್ಯಗೊಂಡಿದೆ.
ಗುರುವಾರ ನಡೆದ ಹತ್ತನೇ ತರಗತಿಯ ವಿಜ್ಙಾನ ಪರೀಕ್ಷೆ ವೇಳೆ ಈ ಘಟನೆಯ ವರದಿಯಾಗಿದೆ. ಪರೀಕ್ಷಾ ಕೇಂದ್ರದ ಹೊರಗಿನಿಂದ ವಿದ್ಯಾರ್ಥಿಗಳ ಸ್ನೇಹಿತರು ಕಾಪಿ ಚೀಟಿಯನ್ನು ನೀಡುತ್ತಿದ್ದರೆ, ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳು ಉತ್ತರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳತ್ತ ಪರೀಕ್ಷೆಯನ್ನು ಬರೆದಿದ್ದಾರೆ.
ವಿದ್ಯಾರ್ಥಿಗಳಿಗೆ ರಾಜಾರೋಷವಾಗಿ ಉತ್ತರ ಹೇಳಿಕೊಡುತ್ತಿದ್ದರು ಯಾರೂ ಕೂಡ ಅದನ್ನು ಪ್ರಶ್ನಿಸದೆ ಇರುವುದು ಆಶ್ಚರ್ಯ ಉಂಟು ಮಾಡಿದೆ. ಹೀಗೆ ಮಾಸ್ ಕಾಪಿ ಮಾಡಿದರು ಪರೀಕ್ಷಾ ಮೇಲ್ವಿಚಾರಕರಾಗಲಿ, ಭದ್ರತಾ ಸಿಬ್ಬಂದಿಗಳಾಗಲಿ ಯಾರೂ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವುದರ ಬಗ್ಗೆ ಮಾಹಿತಿ ನೀಡಲೆಂದೆ ಪರೀಕ್ಷಾ ಕೇಂದ್ರದ ಸುತ್ತಲು 500 ಮೀಟರ್ ಅಂತರದಲ್ಲಿ ವ್ಯವಸ್ಥಿತವಾಗಿ ವಾಹನ ಸವಾರರನ್ನು ನಿಲ್ಲಿಸಲಾಗಿದ್ದು ನಾಟಕೀಯವಾಗಿ ಪರೀಕ್ಷೆಯ ಅಕ್ರಮ ನಡೆದಿದೆ.
ಪರೀಕ್ಷಾ ಕೇಂದ್ರಕ್ಕೆ ಟೈಮ್ಸ್ ವರದಿಗಾರ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿರುವಂತೆ ಕಾಣುತ್ತಿತ್ತು. ಆದರೆ, ಪರೀಕ್ಷಾ ಕೇಂದ್ರಕ್ಕೆ ಒಬ್ಬ ಆಗಂತುಕ ಬಂದಿರುವುದನ್ನು ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿ ಹಾಗೂ ಪೊಲೀಸರು ಸೇರಿದಂತೆ ಯಾರು ಪ್ರಶ್ನೆ ಮಾಡದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.