ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವ ಮಾತನ್ನು ಇನ್ನು ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳೆ ಹೇಳುವ ಹಾಗಿಲ್ಲ. ಏಕೆಂದರೆ ಹತ್ತನೇ ತರಗತಿಯಲ್ಲಿ ಗಣಿತದ ವಿಷಯವನ್ನು ಕಡ್ಡಾಯವಾಗಿ ಬರೆಯಬೇಕಾಗಿಲ್ಲ ಎಂದು ಬಾಂಬೆ ಹೈ ಕೋರ್ಟ್ ತೀರ್ಪು ನೀಡಿದೆ.
ಗಣಿತವನ್ನು ಓದುವುದು ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು, ವಿದ್ಯಾರ್ಥಿಗಳು ಗಣಿತ ವಿಷಯವನ್ನು ಆಪ್ಷನಲ್ ವಿಷಯವನ್ನಾಗಿಸಲು ಶಿಕ್ಷಣ ಇಲಾಖೆಗೆ ಸೂಚಿಸಿದೆ.
ಗಣಿತದ ಪರೀಕ್ಷೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಫೇಲ್ ಆಗುತ್ತಿದ್ದು, ಅವರು ಮುಂದಿನ ವಿದ್ಯಾಭ್ಯಾಸ ಪೂರೈಸಲು ಕಷ್ಟವಾಗುತ್ತಿದೆ. ಅಲ್ಲದೇ ಕಾಲೇಜಿನಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಗಣಿತದಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳುವುದರ ಮೂಲಕ ಹೈ ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ.
ಹತ್ತನೇ ತರಗತಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಯನ್ನು ಗುರುತಿಸಿ ಮನೋವೈದ್ಯರಾದ ಹರೀಶ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ವಿ.ಎಂ ಕನಾಡೆ ಮತ್ತು ನ್ಯಾಯಮೂರ್ತಿ ಎ.ಎಂ ಬಾದರ್ ಅವರನ್ನು ಒಳಗೊಂಡ ಬೆಂಚ್ ಈ ನಿರ್ಧಾರಕ್ಕೆ ಬಂದಿದೆ.
1960ರಲ್ಲಿ ಇದ್ದ ಶಿಕ್ಷಣದಂತೆ ವಿದ್ಯಾರ್ಥಿಗಳು ಗಣಿತ ಹೊರತುಪಡಿಸಿ ಏಳು ಅಥವಾ ಎಂಟು ವಿಷಯಗಳಲ್ಲಿ ತೇರ್ಗಡೆಯಾದರೆ ಅವರು ಪದವಿ ಶಿಕ್ಷಣಕ್ಕೆ ಅರ್ಹರಾಗುತ್ತಿದ್ದರು. ಸಂಸ್ಕೃತವನ್ನು ಆಪ್ಷನ್ ಎಂದು ಪರಿಗಣಿಸುವ ರೀತಿ ಗಣಿತವನ್ನು ಏಕೆ ಪರಿಗಣಿಸುವುದಿಲ್ಲ. ಹಿಂದಿನ ಶಿಕ್ಷಣ ಪದ್ಧತಿಯನ್ನು ಮತ್ತೆ ಅಳವಡಿಸಿಕೊಳ್ಳವ ಬಗ್ಗೆ ಯೋಚಿಸಬೇಕು ಎಂದು ಕಾನಡೆಯವರು ಹೇಳಿದ್ದಾರೆ.
ಪದವಿಗಳಲ್ಲಿ ಕಲೆ ಅಥವಾ ಗಣಿತವಿಲ್ಲದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಗಣಿತದ ಅಗತ್ಯವಿಲ್ಲ, ಗಣಿತವನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.