ಅನುದಾನಿತ ಶಾಲೆಗಳು ಮಾನ್ಯತೆ ನವೀಕರಿಸಿಕೊಳ್ಳಲು ತೋರಿದ ನಿರ್ಲಕ್ಷ್ಯದಿಂದ ಸುಮಾರು 16 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬದುಕು ಅತಂತ್ರಕ್ಕೆ ಸಿಲುಕಿದೆ.
ಮಾರ್ಚ್ 23ರಿಂದ ಏಪ್ರಿಲ್ 6ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ
ರಾಜ್ಯದ 327 ಅನುದಾನಿತ ಶಾಲೆಗಳು ಮಾನ್ಯತೆ ನವೀಕರಿಸಿಕೊಂಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಆ ಶಾಲೆಗಳ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಸ್ಥಿತಿ ನಿರ್ವಣವಾಗಿದೆ.
ಮಾರ್ಚ್ 1 ರಿಂದ 17 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ
ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿದ್ದು, ವಿದ್ಯಾರ್ಥಿಗಳ ನೋಂದಣಿ ಸ್ವೀಕರಿಸುತ್ತಿದೆ. ಹೀಗಾಗಿ ಮಾನ್ಯತೆ ನವೀಕರಣ(ಆರ್ಆರ್) ಮಾಡಿದ ಶಾಲೆಗಳ ಪಟ್ಟಿ ಪರಿಶೀಲಿಸುವಾಗ ಈ ಅಂಶ ತಿಳಿದು ಬಂದಿದೆ.
ರಾಜ್ಯದಲ್ಲಿರುವ ಜಿಲ್ಲಾ ಉಪನಿರ್ದೇಶಕರಿಗೆ ಮಂಡಳಿಯು ಶೀಘ್ರವಾಗಿ ಶಾಲೆಗಳ ಮಾನ್ಯತೆ ನವೀಕರಿಸುವಂತೆ ಸೂಚನೆ ನೀಡಿದೆ. ಈಗಲೂ ಮಾನ್ಯತೆ ನವೀಕರಿಸಿಕೊಳ್ಳದಿದ್ದರೆ ಮಾರ್ಚ್ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ಆ ಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ.
ಪ್ರತಿವರ್ಷ ಶಾಲೆಗಳು ಆರ್ಆರ್ ಮಾಡಿಸಿಕೊಳ್ಳುವುದು ಕಡ್ಡಾಯ. ಆದರೆ, ಶಾಲೆಗಳು ಅಸಡ್ಡೆ ತೋರಿಸಿ, ಕೊನೆ ಕ್ಷಣದವರೆಗೂ ಇದರ ಗೋಜಿಗೆ ಹೋಗುವುದಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗುತ್ತದೆ.
ಮಾನ್ಯತೆ ನವೀಕರಣ ಮಾಡಿಕೊಳ್ಳಬೇಕಾದರೆ ಅಗತ್ಯ ಮೂಲ ಸೌಕರ್ಯವಿರಬೇಕು. ಜತೆಗೆ ಕನಿಷ್ಠ ಪ್ರತಿ ತರಗತಿಯಲ್ಲಿ 25 ವಿದ್ಯಾರ್ಥಿಗಳು ಇರಲೇ ಬೇಕು. ಕಳೆದ ವರ್ಷ ಕೂಡ ಇದೇ ರೀತಿ ಸಾಕಷ್ಟು ಶಾಲೆಗಳು ಮಾನ್ಯತೆ ನವೀಕರಿಸಿಕೊಂಡಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ 25 ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿರಬೇಕೆಂಬ ನಿಯಮವನ್ನು ಸಡಿಲಿಕೆ ಮಾಡಿ ನವೀಕರಿಸಿಕೊಳ್ಳಲು ಅವಕಾಶ ಕಲ್ಪಿಸಿತ್ತು.
ಶಾಲೆಗಳು ಮಾನ್ಯತೆ ಪಡೆದುಕೊಳ್ಳದಿದ್ದರೆ ಅವುಗಳು ಅನಧಿಕೃತ ಪಟ್ಟಿಗೆ ಸೇರಲಿವೆ. 2015ರಲ್ಲಿ ಇದೇ ರೀತಿ 1,266 ಶಾಲೆಗಳನ್ನು ಅನಧಿಕೃತವೆಂದು ಘೋಷಣೆ ಮಾಡ ಲಾಗಿತ್ತು. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಖಾಸಗಿ ವಿದ್ಯಾರ್ಥಿಗಳೆಂದು ಪರಿಗಣಿಸಲು ನಿರ್ಧರಿಸಿತ್ತು.
ಮಾನ್ಯತೆ ನವೀಕರಿಸಿಕೊಳ್ಳದ ಶಾಲೆಗಳಿಗೆ ಶೀಘ್ರವಾಗಿ ನವೀಕರಿಸಿಕೊಳ್ಳುವಂತೆ ಸೂಚಿಸಿದ್ದೇವೆ. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಲಾಗುವುದು ಎಂದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಾದ ವಿ.ಸುಮಂಗಲಾ ತಿಳಿಸಿದ್ದಾರೆ.