ಸರ್ವ ಶಿಕ್ಷಣ ಅಭಿಯಾನ ಮೂಲಕ ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಕಲ್ಪನೆ ಬಂದಿದ್ದರು. ಇನ್ನು ಅನೇಕ ಗ್ರಾಮಗಳಲ್ಲಿ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಅದರಲ್ಲೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಕಾಲೇಜು ಶಿಕ್ಷಣವನ್ನು ಕಾಣದೆ, ಪದವೀಧರರೇ ಇಲ್ಲದ ಸಾವಿರಾರು ಗ್ರಾಮಗಳು ಇನ್ನು ನಮ್ಮಲ್ಲಿವೆ.
ಇತ್ತೀಚೆಗೆ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಮೀಕ್ಷೆಯಲ್ಲಿ ಪದವೀಧರರೇ ಇಲ್ಲದ ಗ್ರಾಮಗಳ ಪಟ್ಟಿಯನ್ನು ರಾಜ್ಯ ಸರ್ಕಾರದ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾಲೇಜು ಶಿಕ್ಷಣ ಇಲಾಖೆಗೆ ನೀಡಿದ್ದು, ಒಬ್ಬ ಪದವೀಧರನೂ ಇಲ್ಲದ 2022 ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ.
ಈ ಅಂಕಿ ಅಂಶಗಳನ್ನು ಆಧಾರಿಸಿ ಪದವೀಧರರೇ ಇಲ್ಲದ 2,022 ಗ್ರಾಮಗಳಲ್ಲಿ ಕನಿಷ್ಠ ಒಬ್ಬರನ್ನಾದರೂ ಪದವೀಧರರನ್ನಾಗಿ ರೂಪಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ನೋಡಲ್ ಕಾಲೇಜು ಮೂಲಕ ಗ್ರಾಮದಲ್ಲಿ ಪದವೀಧರರನ್ನು ರೂಪಿಸುವ ಯೋಜನೆಯಲ್ಲಿದೆ.
ಗ್ರಾಮಗಳಲ್ಲಿ ಕನಿಷ್ಠ ಒಬ್ಬ ಪದವೀಧರಾದರೂ ಇರುವಂತೆ ಮಾಡಲು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ವೀಡಿಯೊ ಸಂವಾದ ನಡೆಸಿದ್ದಾರೆ. ಇದಕ್ಕಾಗಿ 30 ಜಿಲ್ಲೆಗಳ ಲೀಡ್ ಕಾಲೇಜುಗಳ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ ಒಂದು ಕಾಲೇಜಿನ ಪ್ರಾಂಶುಪಾಲರನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ಗುರುತಿಸಬೇಕು. ಪದವೀಧರರು ಇಲ್ಲದ ಗ್ರಾಮಕ್ಕೆ ಒಬ್ಬರು ಉಪನ್ಯಾಸಕರನ್ನು ಕಳುಹಿಸಿ, ಅಲ್ಲಿನ ಶೈಕ್ಷಣಿಕ ಸ್ಥಿತಿಗತಿ ಪರಿಶೀಲಿಸಲಾಗುವುದು. ಪಿಯು ಮುಗಿಸಿ ಪದವಿ ಶಿಕ್ಷಣಕ್ಕೆ ಬಾರದಿರುವವರು ಅಥವಾ ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದವರನ್ನು ಶಿಕ್ಷಣ ಮುಂದುವರಿಸುವಂತೆ ಮನವೊಲಿಸಿ, ಅಗತ್ಯ ಮಾರ್ಗದರ್ಶನ ನೀಡಲಾಗುವುದು.
ಆ ಗ್ರಾಮದ ಬಗ್ಗೆ ಉಪನ್ಯಾಸಕರು ತಾಲ್ಲೂಕು ನೋಡಲ್ ಅಧಿಕಾರಿಗೆ ವರದಿ ಸಲ್ಲಿಸಬೇಕು. ತಾಲ್ಲೂಕಿನಿಂದ ಜಿಲ್ಲಾ ನೋಡಲ್ ಅಧಿಕಾರಿಗೆ ವರದಿ ಸಲ್ಲಿಕೆಯಾಗಿ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ನಿರ್ಣಯಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
'ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ಪ್ರವೇಶಾತಿ ಅನುಪಾತ (ಜಿ.ಎ.ಆರ್) ಹೆಚ್ಚಿಸುವುದು ಮತ್ತು ಗ್ರಾಮೀಣ ಭಾಗದ ಯುವಕರೂ ಪದವೀಧರರಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೋಡಲ್ ಅಧಿಕಾರಿಯಾಗುವ ಪ್ರಾಂಶುಪಾಲರಿಗೆ ಈಗಾಗಲೇ ಸೂಕ್ತ ಮಾರ್ಗದರ್ಶನ ನೀಡಲಾಗಿದೆ' ಎಂದು ಕಾಲೇಜು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪದವೀಧರರಿಲ್ಲದ ಜಿಲ್ಲೆಗಳು
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಾಮನರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರ್ಗಿ, ಹಾಸನ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉತ್ತರಕನ್ನಡ, ಯಾದಗಿರಿ