71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವದೆಹಲಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ, ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ ಛೋಡೋ (ಕ್ವಿಟ್ ಇಂಡಿಯಾ) ಚಳವಳಿ ರೀತಿ ಭಾರತ್ ಜೋಡೋ ಚಳವಳಿ ಆಚರಿಸಬೇಕಿದೆ ಎಂದು ಕರೆ ನೀಡಿದರು.
''ಸ್ವಾತಂತ್ರ್ಯಕ್ಕಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡಿದವರನ್ನು ನಾವು ಇಂದು ನೆನಪಿಸಿಕೊಳ್ಳಬೇಕು. ಅವರ ಆ ತ್ಯಾಗ, ಬಲಿದಾನಗಳಿಂದಲೇ ನಾವು ಇಂದು ಸ್ವತಂತ್ರ್ಯ ದೇಶದಲ್ಲಿ ಜೀವಿಸುವಂತಾಗಿದೆ. ಅವರ ಬಲಿದಾನಗಳನ್ನು ಸಾರ್ಥಕಗೊಳಿಸಬೇಕೆಂದರೆ ನಾವು ಭಾರತ್ ಜೋಡೋ ಚಳವಳಿಯನ್ನು ಹಮ್ಮಿಕೊಳ್ಳಲೇಬೇಕು'' ಎಂದು ವಿವರಿಸಿದರು
ಇಂದು ತಮ್ಮ ನಾಲ್ಕನೇ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಮೋದಿಯವರು ಭಾರತ್ ಛೋಡೋ (ಕ್ವಿಟ್ ಇಂಡಿಯಾ ಅಥವಾ ಚಲೇ ಜಾಂವ್) ಚಳವಳಿ ನಡೆಸಲಾಗಿತ್ತು. ಇಂದು ನಾವು ಭಾರತ್ ಜೋಡೋ (ಭಾರತವನ್ನು ಒಗ್ಗೂಡಿಸುವ) ಚಳವಳಿ ಆರಂಭಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
1942ರಿಂದ 1947ರವರೆಗೆ ನಡೆದ ಕ್ವಿಟ್ ಇಂಡಿಯಾ 1942ರಲ್ಲಿ ಚಳವಳಿಯು ಭಾರತಕ್ಕೆ ಸ್ವತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಮಹತ್ವಪೂರ್ಣವಾದದ್ದು. - ಆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತಮ್ಮ ತನು,ಮನ, ಜೀವನಗಳನ್ನೇ ದೇಶಕ್ಕಾಗಿ ಹೆಚ್ಚೆಚ್ಚು ಸಮರ್ಪಿಸಿದರು. ಹೆಗಲಿಗೆ ಹೆಗಲು ಕೊಟ್ಟು ನಿಂತು ಭಾರತಕ್ಕೆ ಸ್ವತಂತ್ರ್ಯ ತಂದುಕೊಡಲೇಬೇಕೆಂಬ ಉತ್ಕಟ ಅಭೀಪ್ಸೆಯಿಂದ ಹೋರಾಟ ನಡೆಸಿದರು. ಅಂಥದ್ದೇ ಒಂದು ಹೋರಾಟ ಈಗ ನಮ್ಮ ಭಾರತದ ಅಭಿವೃದ್ಧಿಗಾಗಿ ಆಗಲೇಬೇಕಿದೆ. - ನಮ್ಮ ಸಮಾಜದ ಅನಿಷ್ಟಗಳ ವಿರುದ್ಧ, ಸಮಸ್ಯೆಗಳ ವಿರುದ್ಧ ಎಲ್ಲಾ ನಾಗರಿಕರೂ ಸಿಡಿದೇಳಬೇಕಿದೆ. 'ಚಲ್ತಾ ಹೇ' (ಹೇಗೋ ನಡೆದುಹೋಗುತ್ತೆ) ಎನ್ನುವ ಮನಸ್ಥಿತಿಗಳಿಂದ ನಾವು ಹೊರಬರಬೇಕಿದೆ. - 2018ರ ಜನವರಿ 1ನೇ ದಿನಾಂಕವು ಕೇವಲ ಹೊಸ ವರ್ಷದ ಆಚರಣೆಯಲ್ಲ. ಅಂದು, ಈ ಹೊಸ ಶತಮಾನದಲ್ಲಿ ಹುಟ್ಟಿದವರು 18ನೇ ವಯಸ್ಸಿಗೆ ಕಾಲಿಡುವಂಥ ಸುದಿನ. ಮುಂದಿನ ಭಾರತದ ಶಿಲ್ಪಿಗಳು ಅವರೇ. ಹಾಗಾಗಿ, ಅವರನ್ನು ಭಾರತದ 'ಭಾಗ್ಯ ವಿದಾತರು' ಎಂದು ಕರೆಯಬಯಸುತ್ತೇನೆ.
ಈ ವರ್ಷ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷವಾಗಿದ್ದು, ಚಂಪಾರಣ ಸತ್ಯಾಗ್ರಹದ 100ನೇ ವರ್ಷಾಚರಣೆಯೂ ಆಗಿದೆ. ಇಷ್ಟೇ ಅಲ್ಲದೆ, ಗಣೇಶ ಉತ್ಸವವು ನಮ್ಮ ದೇಶದಲ್ಲಿ ಆರಂಭವಾಗಿ 125 ವರ್ಷಗಳಾಗಿವೆ. ಹಾಗಾಗಿ, ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾರೀ ವಿಶೇಷವಾದದ್ದು ಎಂದು ಹೇಳಿದರು.