ಇಂದು ಭಾರತದೆಲ್ಲಡೆ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಅದಕ್ಕೆ ಕಾರಣ ಮೇಜರ್ ಧ್ಯಾನ್ ಚಂದ್.
ಧ್ಯಾನ್ ಚಂದ್ ಎಂಬ ದ್ರುವ ತಾರೆ ಈಗ ಬದುಕಿದಿದ್ದರೆ ಭಾರತದಲ್ಲಿ ಕ್ರೀಡಾ ಜಗತ್ತನ್ನು, ಜಾಹೀರಾತು ಜಗತ್ತನ್ನು ಆಳುತ್ತಿರುವ ಕ್ರಿಕೆಟ್ ಪಟುಗಳು ಕೂಡ ಹಿಂದೆ ಸರಿಯುವಂತಹ ಪರಿಸ್ಥಿತಿ ನಿರ್ಮಾಣವಾದರು ಅಚ್ಚರಿ ಇರುತ್ತಿರುಲಿಲ್ಲ.
ಇಂದು ಒಲಿಂಪಿಕ್ ನಲ್ಲಿ ಕಂಚಿನ ಪದಕವೋ, ಬೆಳ್ಳಿಯ ಪದಕವೋ ಬಂದರೆ ಮುಂದಿನ ಒಲಂಪಿಕ್ ವರೆಗೂ ಸಂಭ್ರಮಿಸುತ್ತೇವೆ, ಹೀಗಿರುವಾಗ ಸ್ವಾತಂತ್ರ್ಯಪೂರ್ವದಲ್ಲೇ ಭಾರತಕ್ಕೆ ಒಂದಲ್ಲ, ಎರಡಲ್ಲ ಸತತ ಮೂರು ಒಲಿಂಪಿಕ್ ಗಳಲ್ಲಿ ಚಿನ್ನ ಗೆದ್ದು ಕೊಟ್ಟ ಧ್ಯಾನ್ ಚಂದ್ ರ ಸಾಧನೆ ಸಾಧಾರಣವಲ್ಲ.
ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯರು. ಅವರ ಹಾಕಿ ಆಟಕ್ಕೆ ಮನಸೋಲದವರೇ ಇಲ್ಲ. ತಮ್ಮ ಅದ್ಭುತ ಆಟದಿಂದಾಗಿ ಎದುರಾಳಿ ತಂಡದವರನ್ನು ಮತ್ತು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಧ್ಯಾನ್ ಚಂದ್ ನಿಜವಾಗಿಯೂ ಭಾರತೀಯರ ಹೆಮ್ಮೆ.
ಧ್ಯಾನ್ ಚಂದ್ ಹುಟ್ಟು ಕ್ರೀಡಾಪಟುವಲ್ಲ, ಕ್ರೀಡೆಯನ್ನು ಅವರು ವಿಶೇಷವಾಗಿ ಅಭ್ಯಾಸ ಮಾಡಲು ಇಲ್ಲ. ಧ್ಯಾನ್ ಚಂದ್ ಜನಿಸಿದ್ದು ಆಗಸ್ಟ್ 29, 1905ರಲ್ಲಿ. ಸ್ಥಳ ಉತ್ತರ ಪ್ರದೇಶದ ಪ್ರಯಾಗ. ಅವರ ತಂದೆ ಭಾರತೀಯ ಬ್ರಿಟಿಷ್ ಸೈನ್ಯದಲ್ಲಿ ಹವಾಲ್ದಾರರಾಗಿದ್ದರು. ಶಾಲೆಯಿಂದ ಬಹುಬೇಗ ಹೊರನೆಡೆದ ಧ್ಯಾನ್ ಚಂದ್ ತಮ್ಮ ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಸೈನ್ಯದಲ್ಲಿ ಸ್ನೇಹ ಪೂರ್ಣ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. ಈತ ಆಡುವ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡ ಸುಭೇದಾರ್ ಮೇಜರ್ ಭೋಲೇ ತಿವಾರಿ ಎಂಬುವರು ಧ್ಯಾನ್ ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗೆಗೆ ಉತ್ತಮ ತರಬೇತಿ ನೀಡಿದರು.
ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಲಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿದ ಧ್ಯಾನ್ ಚಂದ್, ಹಲವು ಅಂತರರಾಷ್ಟ್ರೀಯ ಪಂದ್ಯಗಳ ಬಳಿಕ ಒಲಿಂಪಿಕ್ಸ್ ಪಂದ್ಯಾವಳಿಗೆ ತಲುಪಿ ತಾವು ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಮಹತ್ತರವಾದ ಪಾತ್ರ ವಹಿಸಿದರು.
ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 33.
ಆ ಕಾಲದಲ್ಲಿ ಫುಟ್ ಬಾಲ್ ಆಟದಲ್ಲಿ ಪೀಲೆ, ಕ್ರಿಕೆಟ್ಟಿನಲ್ಲಿ ಡೊನಾಲ್ಡ್ ಬ್ರಾಡ್ ಮನ್ ಅವರ ಸಾಧನೆಗಳು ಎಂತಿವೆಯೋ ಅಂತದ್ದೇ ಮಟ್ಟದ ಹೆಸರು ಧ್ಯಾನ್ ಚಂದ್ ಅವರದ್ದು.
ಧ್ಯಾನ್ ಚಂದ್ ಆಟಕ್ಕೆ ಬೆರಗಾಗಿದ್ದ ಜಪಾನ್ ಒಮ್ಮೆ ಧ್ಯಾನ್ ಚಂದ್ ಬಳಸುವ ಹಾಕಿ ಸ್ಟಿಕ್ ಪರೀಕ್ಷಿಸಲು ಮುಂದಾಗಿತ್ತಂತೆ. ಅವರ ಹಾಕಿ ಸ್ಟಿಕ್ ನಲ್ಲಿ ಮ್ಯಾಗ್ನೆಟ್ ಇರಬಹುದು, ಇಲ್ಲವೇ ಗ್ಲೂ ಇರಬಹುದು ಎಂದು ಸಂಶಯ ಪಟ್ಟಿದ್ದು ವಿಶ್ವಾದ್ಯಂತ ಸುದ್ದಿಯಾಗಿತ್ತು.
ಧ್ಯಾನ್ ಚಂದ್ ರ ಜನಪ್ರಿಯತೆ ಮತ್ತು ಜಾಣ್ಮೆ:
ಒಮ್ಮೆ ಧ್ಯಾನ್ ಚಂದ್ ಅವರು ಆಡಿದ ಪಂದ್ಯದಲ್ಲಿ ಅವರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲವಂತೆ. ಕಡೆಗೆ ಧ್ಯಾನ್ ಚಂದ್ ಅವರು ಮ್ಯಾಚ್ ರೆಫರಿ ಅವರೊಂದಿಗೆ ವಾಗ್ವಾದ ಹೂಡಿ ನೇರವಾಗಿ "ಈ ಕ್ರೀಡಾಂಗಣದಲ್ಲಿ ಇರುವ 'ಗೋಲ್ ಪೋಸ್ಟ್' ಅಳತೆ ಅಸಮರ್ಪಕವಾದುದು, ಹಾಕಿ ಆಟದ ಅಂತರರಾಷ್ಟ್ರೀಯ ನಿಯಮಾವಳಿಗಳಿಗೆ ವ್ಯತಿರಿಕ್ತವಾದದ್ದು" ಎಂದು ನುಡಿದರಂತೆ. ಧ್ಯಾನ್ ಚಂದ್ ಅವರ ಅಭಿಪ್ರಾಯವನ್ನು ಮನ್ನಿಸಿ ನಿಜವಾದ ಅಳತೆ ಮಾಡಿದಾಗ ಧ್ಯಾನ್ ಚಂದ್ ಅವರ ಅಭಿಪ್ರಾಯ ಅಕ್ಷರಷಃ ನಿಜವಾಗಿತ್ತು.
1936ರ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ನಂತರದಲ್ಲಿ, ಎಲ್ಲೆಡೆಯಲ್ಲೂ ಧ್ಯಾನ್ ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು. ಒಂದು ಜರ್ಮನ್ ಪತ್ರಿಕೆ "ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ. ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ ಧ್ಯಾನ್ ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ". ಎಂದು ವರದಿ ನೀಡಿತ್ತು.
ಅಪ್ಪಟ ದೇಶಪ್ರೇಮಿ ಧ್ಯಾನ್ ಚಂದ್ :
ಬರ್ಲಿನ್ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ ಚಂದ್ ಅವರ ಆಟ ಕಂಡ ಅಡೋಲ್ಫ್ ಹಿಟ್ಲರ್ ಧ್ಯಾನ್ ಚಂದ್ ಅವರಿಗೆ "ಬ್ರಿಟಿಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ ನೀಡಲು ಆಹ್ವಾನಿಸಿದ್ದರು, ಆದರೆ ಇದನ್ನು ತಿರಸ್ಕರಿದ ಧ್ಯಾನ್ ಚಂದರು ನಾನೊಬ್ಬ ಅಪ್ಪಟ ಭಾರತೀಯ, ಭಾರತದಲ್ಲೇ ನಾನು ಹಾಯಾಗಿದ್ದೇನೆ ಎಂದು ನಯವಾಗಿ ಹೇಳಿ ದೇಶಪ್ರೇಮ ಮೆರೆದಿದ್ದರು.
ಧ್ಯಾನ್ ಚಂದ್ ಜನಪ್ರಿಯತೆ ಎಷ್ಟಿತ್ತೆಂದರೆ ಭಾರತಕ್ಕೂ ಮೊದಲೇ ಅವರ ಪುತ್ಥಳಿಯನ್ನು ಆಸ್ಟ್ರಿಯಾದ ವಿಯೆನ್ನಾದಲ್ಲಿ ಸ್ಥಾಪಿಸಲಾಗಿತ್ತು. ಹೀಗೆ ಭಾರತದ ಒಬ್ಬ ಆಟಗಾರ ತನ್ನ ಮಹೋನ್ನತ ಸಾಧನೆಗಳಿಂದ ದಂತಕತೆಯಾಗಿರುವುದು ಭಾರತೀಯರಿಗೆಲ್ಲಾ ಮಹೋನ್ನತವಾದ ಹೆಮ್ಮೆ.