ಒಂದು ಕಾಲದಲ್ಲಿ ದಸರಾ ಬಂತೆಂದರೆ ಇಡಿ ನಾಡಿಗೆ ನಾಡೇ ಸಂಭ್ರಮಿಸುತ್ತಿತ್ತು. ಪುಟ್ಟ ಮಕ್ಕಳಿಗೆ ದಸರಾ ರಜೆ ಎನ್ನುವುದು ಎಲ್ಲಿಲ್ಲದ ಸಂತೋಷವನ್ನು ತಂದುಕೊಡುತ್ತಿತ್ತು. ಆದರೆ ಇಂದು ದಸರಾ ಸಡಗರದಿಂದ ಮಕ್ಕಳು ದೂರ ಉಳಿಯುವ ಸಂದರ್ಭ ಬಂದಿದೆ.
2017 -18 ನೇ ಶೈಕ್ಷಣಿಕ ವರ್ಷದಲ್ಲಿನ ಮಧ್ಯಂತರ ರಜೆ ಅಥವಾ ದಸರ ರಜೆಯನ್ನು ಅಕ್ಟೋಬರ್ 11 ರಿಂದ 25 ರವರೆಗೆ ಒಟ್ಟು 15 ದಿನಗಳ ರಜೆ ನಿಗದಿಪಡಿಸಿ ರಾಜ್ಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ದಸರಾ ಸೆ.21 ರಿಂದ ಆರಂಭವಾಗಿ ಸೆ.30 ರವರೆಗೆ ನಡೆಯಲಿದೆ, ಆದರೆ ಮಕ್ಕಳಿಗೆ ರಜೆಯನ್ನು ಅಕ್ಟೋಬರ್ ಎರಡನೇ ವಾರದಲ್ಲಿ ನೀಡಲಾಗಿದೆ. ಅಲ್ಲದೆ ದಸರಾ ಸಡಗರದ ಸಮಯದಲ್ಲಿ ಮಕ್ಕಳು ಪರೀಕ್ಷೆಗಳನ್ನು ಎದುರಿಸಬೇಕಾಗಿದ್ದು, ದಸರಾ ರಜೆ ಇದ್ದು ಇಲ್ಲದಂತಾಗಿದೆ.
ಮಕ್ಕಳೊಂದಿಗೆ ಪೋಷಕರು ಕೂಡ ದಸರಾದಿಂದ ದೂರ ಉಳಿಯುವಂತಾಗಿದೆ. ಪ್ರತಿ ಬಾರಿ ದಸರೆ ಬಂತೆಂದರೆ ರಜೆಗೆ ಊರುಗಳಿಗೆ ತೆರಳುತ್ತಿದ್ದ ಪೋಷಕರು, ಮಕ್ಕಳ ಶಿಕ್ಷಣದ ಕಾಳಜಿಯಿಂದಾಗಿ ಪೋಷಕರು ಕೂಡ ಕೈಕಟ್ಟಿ ಕೂರುವಂತಾಗಿದೆ. ಇದರಿಂದಾಗಿ ಹಬ್ಬಗಳಿಗೆ ಅಜ್ಜಿ ತಾತನ ಮನೆಗೆ ಹೋಗಬೇಕಿದ್ದ ಹುಡುಗರು ನಿರಾಸೆ ಪಡುವಂತಾಗಿದೆ. ಇನ್ನು ಮೊಮ್ಮಕ್ಕಳನ್ನು ನೋಡುವ ಖುಷಿಯಲ್ಲಿದ್ದ ಅಜ್ಜಿ ಅಜ್ಜಂದಿರು ಶಿಕ್ಷಣ ಇಲಾಖೆಯನ್ನು ಶಪಿಸುವಂತಾಗಿದೆ.
ಶಿಕ್ಷಣ ಇಲಾಖೆ ತಾರತಮ್ಯ
ಮೈಸೂರು ಜಿಲ್ಲೆಯ ಮಕ್ಕಳಿಗೆ ಮಾತ್ರ ಸರಿಯಾಗಿ ದಸರೆ ಹಬ್ಬದ ಹೊತ್ತಿಗೇ ದಸರೆ ರಜೆ ಸಿಗುವಂತೆ ಮಾಡುವಲ್ಲಿ ಜಿಲ್ಲಾಡಳಿತ ವಿಶೇಷ ಕಾಳಜಿ ತೋರಿದೆ. ಇದರಿಂದ ಇತರೆ ಜಿಲ್ಲೆಗಳ ಮಕ್ಕಳಿಗೆ ತಾರತಮ್ಯ ಮಾಡಿದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿರುವ ಶಾಲೆಗಳಿಗೆ ದಸರಾ ಮಧ್ಯಂತರ ರಜೆಯ ಅವಧಿಯನ್ನು ಮಾರ್ಪಡಿಸಿರುವ ದಸರಾ ವಿಶೇಷಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಶೈಕ್ಷಣಿಕ ವಿಚಾರಕ್ಕೆ ಬಂದರೆ ವರ್ಷದ ಪಾಠ-ಪ್ರವಚನಗಳು ಪರೀಕ್ಷೆಗಳು ರಾಜ್ಯಾದ್ಯಂತ ರಜೆಯ ಆಧಾರದ ಮೇಲೆ ವಿಂಗಡಣೆಯಾಗುತ್ತದೆ. ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಸೆಮಿಸ್ಟರ್ ರಜೆ ಏಕರೂಪದಲ್ಲಿರುವುದಿಲ್ಲ. ರಜೆ ಏಕರೂಪದಲ್ಲಿ ಇಲ್ಲದಿರುವಾಗ ಇದಕ್ಕೆಲ್ಲ ತೊಂದರೆಯಾಗುವುದಿಲ್ಲವೇ? ಶಿಕ್ಷಣ ಇಲಾಖೆ ವಾರ್ಷಿಕ ಕ್ಯಾಲೆಂಡರ್ ನೋಡಿ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ನಿರ್ಧರಿಸದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.
ಒಟ್ಟಾರೆ ಏಕರೂಪ ಶಿಕ್ಷಣ ಪದ್ಧತಿ ಜಾರಿ ತಂದಿರುವ ನಮ್ಮ ಶಿಕ್ಷಣ ಇಲಾಖೆ, ಏಕರೂಪ ರಜೆ ನಿಯಮಾವಳಿಯನ್ನೇಕೆ ಜಾರಿಗೆ ತರುವಲ್ಲಿ ಮುಂದಾಗುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಿದೆ. ನಮ್ಮ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾದ ಶಿಕ್ಷಣವೇ ಇಂದು ಸಂಸ್ಕೃತಿ, ಆಚಾರ ವಿಚಾರಗಳಿಂದ ಮಕ್ಕಳನ್ನು ದೂರ ಮಾಡುತ್ತಿರುವುದು ಬೇಸರದ ಸಂಗತಿ.