ನಿರುದ್ಯೋಗ ಸಮಸ್ಯೆ ಒಂದೆಡೆಯಾದರೆ, ಉದ್ಯೋಗವಿದ್ದರೂ ವೇತನವಿಲ್ಲದಿರುವ ಸಮಸ್ಯೆ ಮತ್ತೊಂದೆಡೆ. ಸರ್ಕಾರಿ ಶಾಲೆಗಳಲ್ಲಿ ಅರೆಕಾಲಿಕ ನೇಮಕಾತಿ ಅಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಈ ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದ ಸಂಬಳ ಸಿಗದೆ ಪರದಾಡುವಂತಾಗಿದೆ.
ಜುಲೈನಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿರುವ ಇವರ ಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದೆ. ವರ್ಷಕ್ಕೊಮ್ಮೆ ಕೊಡುವುದನ್ನೇ ಪ್ರತಿ ತಿಂಗಳೂ ಕೊಡಿ ಎಂಬ ಶಿಕ್ಷಕರ ಆಗ್ರಹಕ್ಕೆ ಇಲಾಖೆಯಿಂದ ನಿರೀಕ್ಷಿತ ಸ್ಪಂದನೆ ದೊರಕಿಲ್ಲ.
ರಾಜ್ಯದಲ್ಲಿ ಅಂದಾಜು 11 ಸಾವಿರ ಅತಿಥಿ ಶಿಕ್ಷಕರಿದ್ದು, ಅವರೆಲ್ಲರೂ ವೇತನದ ನಿರೀಕ್ಷೆಯಲ್ಲೇ ಪಾಠ ಮಾಡುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಡಿಸೆಂಬರ್ನಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ, ಜನವರಿ ಅಥವಾ ಫೆಬ್ರುವರಿಯಲ್ಲಿ ಸಂಬಳ ದೊರಕುತ್ತದೆ ಎಂಬ ಸಂದೇಶವನ್ನು ಈಗಾಗಲೇ ಶಿಕ್ಷಕರಿಗೆ ರವಾನಿಸಲಾಗಿದೆ.
ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವವರಿಗೆ 7,500 ರೂ. ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ 8000 ರೂ. ವೇತನ ನಿಗದಿ ಮಾಡಲಾಗಿದ್ದು, ನೇಮಕಾತಿ ಪತ್ರವನ್ನು ನೀಡದೆಯೇ ಅವರಿಂದ ಸೇವೆ ಪಡೆಯಲಾಗುತ್ತಿದೆ. ನಿರುದ್ಯೋಗದ ನಡುವೆ ದೊರಕಿರುವ ಈ ತಾತ್ಕಾಲಿಕ ಕೆಲಸವೂ ಅವರಿಗೆ ನೆರವಿಗೆ ಬರದಿರುವುದು ಬೇಸರದ ಸಂಗತಿ.
ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅಲ್ಲಿನ ಮುಖ್ಯಶಿಕ್ಷಕರೇ ಸ್ಥಳೀಯ ನಿರುದ್ಯೋಗಿ ಬಿ.ಇಡಿ. ಡಿ.ಇಡಿ ಪದವೀಧರರನ್ನು ಆಯ್ಕೆ ಮಾಡಿಕೊಳ್ಳುವ ಪದ್ಧತಿ ನಾಲ್ಕು ವರ್ಷದಿಂದ ಜಾರಿಯಲ್ಲಿದೆ. ಶಿಕ್ಷಕರು ಜುಲೈನಿಂದ ಮಾರ್ಚ್ವರೆಗಷ್ಟೇ ಕಾರ್ಯ ನಿರ್ವಹಿಸುತ್ತಾರೆ.
'ವೇತನ ಬಿಡುಗಡೆ ಮಾಡುವುದು ಇಲಾಖೆಯ ಕೇಂದ್ರ ಕಚೇರಿಗೆ ಬಿಟ್ಟ ವಿಷಯ. ನಾವು ಏನಿದ್ದರೂ ಶಿಕ್ಷಕರನ್ನು ನೇಮಿಸುವ ಕೆಲಸವನ್ನಷ್ಟೇ ಮಾಡುತ್ತೇವೆ'. ನಿಯಮಿತ ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟಕರ ಎಂಬುದು ನಮಗೂ ತಿಳಿದಿದೆ. ಆದರೆ ಇಲಾಖೆಯ ನೀತಿ ಹಾಗೆಯೇ ಇದೆ' ಎಂದು ಇಲಾಖೆಯ ಉಪನಿರ್ದೇಶಕ ಓ.ಶ್ರೀಧರನ್ ಪ್ರತಿಕ್ರಿಯಿಸಿದ್ದಾರೆ.