ಅಂತೂ ಇಂತೂ 2017-18 ನೇ ಸಾಲಿನ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ ಅನ್ವಯ ಹೊಸ ನಿಯಮಗಳನ್ನು ರೂಪಿಸಿದ್ದು, ಅದರ ಆಧಾರದಲ್ಲಿಯೇ ಶಿಕ್ಷಕರ ಸಾಮಾನ್ಯ ವರ್ಗಾವಣೆ ಮಾಡಲು ಮುಂದಾಗಿದೆ.
ಹತ್ತು ವರ್ಷಕ್ಕಿಂತ ಹೆಚ್ಚು ಸಮಯ ಮಹಾನಗರ ವ್ಯಾಪ್ತಿಯಲ್ಲಿ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಿಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ನಿವೃತ್ತಿಗೆ 2 ವರ್ಷಕ್ಕಿಂತ ಹೆಚ್ಚು ಸಮಯ ಇರುವವರನ್ನು ಗ್ರಾಮಾಂತರಕ್ಕೆ ಕಡ್ಡಾಯವಾಗಿ ವರ್ಗ ಮಾಡಲು ತೀರ್ಮಾನಿಸಿದೆ.
ಇದುವರೆಗೂ ಸಾಮಾನ್ಯ ವರ್ಗಾವಣೆ ನಿಯಮದ ಪ್ರಕಾರ ಶೇ.8ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. ಹೊಸ ಕಾನೂನು ಪ್ರಕಾರ ಶೇ.15ರ ವರೆಗೂ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೊಸ ನಿಯಮದ ಪ್ರಕಾರ ಪಟ್ಟಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮಹಾನಗರ ವ್ಯಾಪ್ತಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಎ ಮತ್ತು ಬಿ ಅಂದರೆ ಪಟ್ಟಣ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ವರ್ಗಾವಣೆ ಪಡೆಯಲು ಅವಕಾಶ ಒದಗಿಸಲಾಗಿದೆ.
ಎ ವಲಯದಲ್ಲಿ (ಮಹಾನಗರ ಪಾಲಿಕೆ ವ್ಯಾಪ್ತಿ) ದೀರ್ಘ ಸೇವೆ ಸಲ್ಲಿಸಿದವರನ್ನು ಸಿ ವಲಯ (ಗ್ರಾಮಾಂತರ ಪ್ರದೇಶ)ಕ್ಕೆ ವರ್ಗಾಯಿಸಲಾಗುತ್ತದೆ. ಸಿ ವಲಯದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಎ ವಲಯಕ್ಕೆ ವರ್ಗಾಯಿಸಲಾಗುತ್ತದೆ. ಅದೇ ರೀತಿ ಬಿ ವಲಯದಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಎ ವಲಯಕ್ಕೆ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ.
ವರ್ಗಾವಣೆ ಕಾಯ್ದೆ ನಿಯಮ 4 ಪ್ರಕಾರ ಹೆಚ್ಚು ಕಾಲ ಸೇವೆ ಸಲ್ಲಿಸಿದವರು ಎ ವಲಯದಿಂದ ಬಿ ವಲಯಕ್ಕೆ ಬಿ ವಲಯದಿಂದ ಸಿ ವಲಯಕ್ಕೆ ವರ್ಗಾವಣೆ ಮಾಡುವುದು ಕಡ್ಡಾಯವಾಗಿದೆ. ಪತಿ-ಪತ್ನಿ ವರ್ಗಾವಣೆ, ಅಂಗವಿಕಲ ಮೀಸಲಾತಿಯಲ್ಲಿ ಯಾವದೇ ಬದಲಾವಣೆ ಮಾಡಲಾಗಿಲ್ಲ.
ಅಂಗವಿಕಲರು, ಅನಾರೋಗ್ಯ ಕಾರಣಕ್ಕೆ ವರ್ಗಾವಣೆ ಬಯಸುವವರು, ಪತಿ ಪತ್ನಿ ವರ್ಗಾವಣೆ, ವಿಧವೆ ಹಾಗೂ ವಿಧುರರ ವರ್ಗಾವಣೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ವರ್ಗಾವಣೆ ದೂರು ಪ್ರಾಧಿಕಾರ ಕೂಡ ಬದಲು ಮಾಡಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನಿರ್ದೇಶಕರಿಗೆ ಜವಾಬ್ದಾರಿ ನೀಡಲಾಗಿದೆ.
ಇದು ಕರಡು ಪ್ರತಿಯಾಗಿದ್ದು, ಆಕ್ಷೇಪಣೆ ಸಲ್ಲಿಸಲು ೧೫ ದಿನ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಆಧಾರದಲ್ಲಿ ಬದಲಾವಣೆ ಮಾಡಿ ಅಂತಿಮ ನಿಯಮಗಳನ್ನು ಮತ್ತೊಮ್ಮೆ ಪ್ರಕಟಿಸಲಾಗುವುದು.