ಒಬಿಸಿ ಕೆನೆಪದರ ವಾರ್ಷಿಕ ಆದಾಯ ಮಿತಿಯನ್ನು ರೂ.6 ಲಕ್ಷದಿಂದ 8 ಲಕ್ಷಕ್ಕೆ ಏರಿಸಿದ ಬೆನ್ನಿಗೇ ಕೇಂದ್ರ ಸರ್ಕಾರ ಉನ್ನತ ಹುದ್ದೆಗಳನ್ನು ಸೇರ್ಪಡೆಗೊಳಿಸಿದೆ.
ಸರ್ಕಾರಿ ಸ್ವಾಮ್ಯದ ಉದ್ಯಮಗಳು (ಪಿಎಸ್ಯು), ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಸರ್ಕಾರಿ ಸೇವೆಯಲ್ಲಿರುವ ಹುದ್ದೆಗಳಿಗೆ ಸಮನಾದ ಹುದ್ದೆಗಳನ್ನು ಸೃಷ್ಟಿಸಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
ಇದೇ ವೇಳೆ ಸಾಮಾಜಿಕವಾಗಿ ಮುಂದುವರಿದ ವ್ಯಕ್ತಿ/ವರ್ಗ ಗಳನ್ನು ಒಬಿಸಿ ಕೋಟಾದಿಂದ ಕೈಬಿಡಲು ತೀರ್ಮಾನಿಸಲಾಗಿದೆ.
ಕಳೆದ 23 ವರ್ಷಗಳಿಂದ ಈ ವಿಚಾರದಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ. ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲು ಜಾರಿಗೆ ಸಂಬಂಧಿಸಿ ಕೆನೆಪದರ ವ್ಯಾಪ್ತಿ ನಿರ್ಧರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ನಿರ್ಧಾರದಿಂದಾಗಿ, ಇಂತಹ ಸಂಸ್ಥೆಗಳ ಕೆಳ ಹಂತದಲ್ಲಿ ಕೆಲಸ ಮಾಡುವ ಒಬಿಸಿ ವರ್ಗಕ್ಕೆ ಸೇರಿದವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಪಡೆಯುವುದು ಸಾಧ್ಯವಾಗಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಅನ್ವಯವಾಗುವ ನಿಯಮಗಳೇ ಈ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೂ ಅನ್ವಯ ಆಗಲಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದಲ್ಲಿರುವ ರೀತಿಯ ಉದ್ಯೋಗ ವರ್ಗೀಕರಣ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿನ ಹುದ್ದೆಗಳಲ್ಲಿ ಇಲ್ಲ. ಜತೆಗೆ, ಆದಾಯದ ಮಾನದಂಡಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿತ್ತು. ಹಾಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಹುದ್ದೆಗಳಲ್ಲಿದ್ದು ಕೆನೆಪದರ ವ್ಯಾಪ್ತಿಗೆ ಬರಬೇಕಾಗಿದ್ದವರ ಮಕ್ಕಳು ಕೂಡ ಒಬಿಸಿ ಮೀಸಲಾತಿ ಪಡೆಯುತ್ತಿದ್ದರು. ಇದರಿಂದ ನಿಜವಾಗಿಯೂ ಮೀಸಲಾತಿಗೆ ಅರ್ಹರಾದವರಿಗೆ ಅನ್ಯಾಯವಾಗುತ್ತಿತ್ತು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಹೊಸ ನಿರ್ಧಾರದಿಂದಾಗಿ ಸರ್ಕಾರಿ ಸ್ವಾಮದ್ಯ ಉದ್ಯಮಗಳ ಆಡಳಿತ ಮಂಡಳಿಯ ಕಾರ್ಯನಿರ್ವಾಹಕರ ಮಟ್ಟದ ಅಧಿಕಾರಿಗಳು, ವೇತನ ಶ್ರೇಣಿ-1ರ ಕಿರಿಯ ವ್ಯವಸ್ಥಾಪಕರು ಮುಂತಾದವರನ್ನು ಸರ್ಕಾರದ ಶ್ರೇಣಿ-1 ಕ್ಕೆ ಸಮಾನವಾದ ಹುದ್ದೆಗಳು ಎಂದು ಪರಿಗಣಿಸಲಾಗುವುದು. ಕ್ಲರ್ಕ್ಗಳು ಮತ್ತು ಕಚೇರಿ ಜವಾನರಂತಹ ನೌಕರರಿಗೆ ಆಯಾ ಸಂದರ್ಭದಲ್ಲಿ ಜಾರಿಯಲ್ಲಿರುವ ಆದಾಯ ಮಿತಿ ಅನ್ವಯವಾಗಲಿದೆ.