ವಿದ್ಯಾರ್ಥಿನಿಯೊಬ್ಬರ ಪತ್ರಕ್ಕೆ ಸ್ಪಂದಿಸುವ ಮೂಲಕ ಪ್ರಧಾನಿ ಮೋದಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಂಡ್ಯ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹಣಕಾಸಿನ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ್ದ ಪ್ರಧಾನಿ ಮೋದಿಯವರು ಈಗ ವಿದ್ಯಾರ್ಥಿನಿಯೊಬ್ಬರು ಬರೆದ ಪತ್ರಕ್ಕೆ ಸ್ಪಂದಿಸಿದ್ದಾರೆ.
ಇದನ್ನು ಗಮನಿಸಿ: ಮಂಡ್ಯ ವಿದ್ಯಾರ್ಥಿನಿ ಸಾರ ನೆರವಿಗೆ ಪ್ರಧಾನ ಮಂತ್ರಿ
ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಬರೆದಿದ್ದ ಪತ್ರಕ್ಕೆ ಉತ್ತರ ಬಂದಿದ್ದು, ವಿದ್ಯಾರ್ಥಿನಿಯ ಬೇಡಿಕೆ ಈಡೇರಿದೆ.
ಬೆಳಗಾವಿ ತಾಲೂಕಿನ ಆತವಾಡ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ವಿದ್ಯಾರ್ಥಿನಿ ಸೀಮಾ ಜ್ಯೋತಿಬಾ ಪಾಟೀಲ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ , ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಯಮಿತವಾಗಿ ಬಸ್ ಸೌಕರ್ಯ ಕಲ್ಪಿಸಲು ಮುಂದಾಗಿದೆ.
ಆನ್ಲೈನ್ ಮೂಲಕ ಪತ್ರ
ಬೆಳಗಾವಿ ತಾಲೂಕಿನ ಆತವಾಡ ಗ್ರಾಮದ ವಿದ್ಯಾರ್ಥಿನಿ ಸೀಮಾ ಜ್ಯೋತಿಬಾ ಪಾಟೀಲ, ಬೆಳಗಾವಿ- ಆತವಾಡ ಮಧ್ಯೆ ಪ್ರತಿ ಗಂಟೆಗೊಂದು ಬಸ್ ಸಂಚಾರ ಆರಂಭಿಸುವಂತೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಗೆ ಆದೇಶಿಸುವಂತೆ ರಾಷ್ಟ್ರಪತಿ, ಪ್ರಧಾನ ಮಂತ್ರಿಗೆ ಆನ್ಲೈನ್ ಮೂಲಕ ಮನವಿ ಮಾಡಿದ್ದರು.
ಹೆಚ್ಚಿದ ಬಸ್ ಸಂಖ್ಯೆ
ವಿದ್ಯಾರ್ಥಿನಿ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ಪ್ರತಿ ಎರಡು ಗಂಟೆಗೆ ಒಂದರಂತೆ ಬಸ್ ಸಂಚಾರ ನಡೆಸಲು ಒಪ್ಪಿಗೆ ಸೂಚಿಸಿದೆ, ಪ್ರಯಾಣಿಕರ ದಟ್ಟಣೆ ಗಮನಿಸಿ ಮುಂದಿನ ದಿನಗಳಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.