ಭಾರತದಲ್ಲಿ ರಾಜಕಾರಣ ದಿನೇ ದಿನೇ ಹೊಸ ದಿಕ್ಕಿನತ್ತ ಸಾಗುತ್ತಿದೆ. ಒಂದು ಕಾಲದಲ್ಲಿ ರಾಜಕೀಯ, ರಾಜಕಾರಣ ಎಂದರೆ ಮೂಗು ಮುರಿಯುತ್ತಿದ್ದ ಯುವಜನತೆ ಈಗ ರಾಜಕೀಯದತ್ತ ಹೆಚ್ಚು ಒಲವು ತೋರುತ್ತಿದೆ.
ಸಾಮಾಜಿಕ ಜಾಲತಾಣ, ಆನ್-ಲೈನ್ ಸುದ್ದಿ ಮಾಧ್ಯಮಗಳ ಸದ್ದಿನಿಂದಾಗಿ ಜನಸಾಮಾನ್ಯರು ಕೂಡ ರಾಜಕಾರಣದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯುವಂತಾಗಿದ್ದಾರೆ.
ಈಗ ರಾಜಕಾರಣ ಕಾಲೇಜ್ ಕ್ಯಾಂಪಸ್ ಗೂ ಪ್ರವೇಶ ಪಡೆದಿದೆ, ಅರ್ಥಾತ್ ರಾಜಕಾರಣ ಕೋರ್ಸ್ ಕೂಡ ಪ್ರಾರಂಭವಾಗಿದೆ. ಅಷ್ಟಕ್ಕೂ ಈ ಕೂರ್ಸ್ ಶುರುವಾಗಿರೋದು ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ ಅವರು ಸ್ಥಾಪಿಸಿರುವ ದಿ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಟಿಕ್ ಲೀಡರ್ಶಿಪ್ ಸಂಸ್ಥೆಯಲ್ಲಿ.
ಇದು ದೇಶದಲ್ಲಿಯೇ ಮೊದಲನೆಯದಾಗಿದ್ದು, ಸ್ನಾತಕೋತ್ತರ ಪದವಿಗೆ ಈ ಕೋರ್ಸ್ ಅನ್ನು ಪರಿಚಯಿಸಲಾಗಿದೆ. ಈ ಕೋರ್ಸ್ ನಲ್ಲಿ ರಾಜಕಾರಣ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ವೃತ್ತಿ ಆಯ್ದುಕೊಳ್ಳುವ ಯುವಜನರಿಗೆ ಅಗತ್ಯವಿರುವ ಮಾರ್ಗದರ್ಶನ ನೀಡಲಾಗುತ್ತದೆ. 'ನಾಯಕತ್ವ, ರಾಜಕಾರಣ, ಆಡಳಿತ ಸಂಬಂಧಿಸಿದಂತೆ ಈ ಕೋರ್ಸ್ನಲ್ಲಿ ಹೇಳಿಕೊಡಲಾಗುತ್ತದೆ.
ಈ ಕೋರ್ಸ್ ಮುಗಿಸಿದವರು ರಾಜಕೀಯ ಪಕ್ಷಗಳಲ್ಲಿ, ಸ್ವಯಂಸೇವಾ ಸಂಸ್ಥೆಗಳಲ್ಲಿ, ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸಮಾಡಬಹುದಾಗಿದೆ. 14 ರಾಜ್ಯಗಳ 450 ಅರ್ಜಿದಾರರಲ್ಲಿ 32 ಅಭ್ಯರ್ಥಿಗಳನ್ನು 9 ತಿಂಗಳ ಕೋರ್ಸ್ಗಳಿಗೆ ಆಯ್ಕೆ ಮಾಡಲಾಗಿದೆ.
ರಾಜ್ಯಸಭಾ ಸದಸ್ಯ ಸಹಸ್ರಬುದ್ದೆ ಅವರು ಉಪಾಧ್ಯಕ್ಷರಾಗಿರುವ ಠಾಣೆ ಜಿಲ್ಲೆಯ ರಂಭು ಮಹಲ್ಲಿ ಪ್ರಬೋಧಿನಿ ಸಂಸ್ಥೆಯಲ್ಲಿ ಬುಧವಾರ ಈ ಕೋರ್ಸ್ನ ಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿತ್ತು.
'ಜೀವನದ ಪ್ರತಿ ಹಂತದಲ್ಲಿಯೂ ನಾಯಕತ್ವದ ಕೊರತೆಯಿದೆ.ನಮ್ಮ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಎನ್ಜಿಒಗಳಲ್ಲಿ ಉತ್ತಮ ಆಡಳಿತಗಾರರಿಲ್ಲ. ಉತ್ತಮ ಯೋಚನೆ ಇರುವ ನಾಯಕರಿಲ್ಲ. ನಮಗೆ ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಉತ್ತಮ ವ್ಯವಸ್ಥಾಪಕರಿಲ್ಲ, ಈ ಕೋರ್ಸ್ ನಿಂದಾಗಿ ಅನೇಕ ಕ್ಷೇತ್ರಗಳಲ್ಲಿನ ನಾಯಕರ ಕೊರತೆ ನೀಗಲಿದೆ' ಎಂದು ಅವರು ಹೇಳಿದ್ದಾರೆ.