ಸರ್ಕಾರಿ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ನೀಡುತ್ತಿರುವ ಬಿಸಿಯೂಟ ಇನ್ನು ಮುಂದೆ ಶಾಲಾ ರಾಜಾ ದಿನಗಳಲ್ಲೂ ಬಿಸಿಯೂಟ ಸಿಗಲಿದೆ.
ಶಾಲಾ ರಜಾ ಅವಧಿಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸುವ ಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ.
ಕೆಲ ದಿನಗಳ ಹಿಂದೆ ಜಾರ್ಖಂಡ್ನಲ್ಲಿ 11 ವರ್ಷದ ಬಾಲಕಿ ಹಸಿವಿನಿಂದ ಮೃತಪಟ್ಟ ಪ್ರಕರಣ ವರದಿಯಾದ ಬೆನ್ನಲ್ಲೇ ಸಚಿವಾಲಯ ಹೀಗೊಂದು ಪರಾಮರ್ಶೆ ನಡೆಸಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ ಮುಂಬರುವ ದಿನಗಳಲ್ಲಿ ರಾಜ್ಯ ಸರಕಾರಗಳಿಗೆ ಸೂಚನೆ ನೀಡುವ ಸಾಧ್ಯತೆಗಳಿವೆ.
ಹಸಿವಿನ ಮಹತ್ವ ಅರಿತವನೇ ಬಲ್ಲ. ಶಾಲಾ ಬಾಲಕಿ ಉಟವಿಲ್ಲದೇ ಮೃತಪಟ್ಟಿರುವ ಘಟನೆ ಅತೀ ಗಂಭೀರವಾದುದು. ಇನ್ಮುಂದೆ ವಾರ್ಷಿಕ ರಜಾ ಅವಧಿಯಲ್ಲೂ ಕಡು ಬಡತನದ ಹಿನ್ನೆಲೆಯುಳ್ಳ ಮಕ್ಕಳಿಗೆ ಬಿಸಿಯೂಟ ನೀಡುವ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ಸಾಧ್ಯತೆಯ ಬಗ್ಗೆ ಚರ್ಚೆ ನಡೆಸಿ ಸಮಗ್ರ ನಿಯಮ ರೂಪಿಸುವ ಅಗತ್ಯವಿದೆ ಎನ್ನುತ್ತಾರೆ ಮಾನವ ಸಂಪನ್ಮೂಲ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಜಂಟಿ ಕಾರ್ಯದರ್ಶಿ ರಿನಾ ರೇ.
ಶಾಲಾ ಮಕ್ಕಳಿಗೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ತಾಯಂದಿರಿಗೆ, ಗರ್ಭಿಣಿಯರಿಗೆ ಅನುವಾಗುವ ನಿಟ್ಟಿನಲ್ಲಿ 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ರಿನಾ ರೇ ಅವರು ತಮ್ಮ ಈ ವಿಚಾರ ಹಂಚಿಕೊಂಡರು.
ಬಿಸಿಯೂಟ ಯೋಜನೆ
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದಲ್ಲಿ ಘೋಷಿಸಲ್ಪಟ್ಟಿರುವಂತೆ ಪ್ರತಿಯೊಬ್ಬ ಹಸಿದ ಮಗುವಿಗೂ ಆಹಾರವನ್ನು ಒದಗಿಸಬೇಕಾಗಿದೆ. ಮಧ್ಯಾಹ್ನ ಉಪಹಾರ ಯೋಜನೆಯು ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಮಕ್ಕಳು ಆರೋಗ್ಯ ಪೂರ್ಣವಾಗಿ ಶಕ್ತಿವಂತರು ಹಾಗೂ ದೃಢಕಾಯರಾಗಿ ಬೆಳೆಯಲು ಒಂದು ಸದವಕಾಶ ಕಲ್ಪಿಸುವ ಬದ್ಧತೆಯಿಂದ ಕೂಡಿದ್ದು, ಸಹಕಾರಿಯಾಗಿದೆ. ಸದರಿ ಕಾರ್ಯಕ್ರಮದ ಪ್ರಮುಖ ಉದ್ದೇಶವು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಹಸಿವು ನೀಗಿಸಿ ತನ್ಮೂಲಕ ಅವರ ಕಲಿಕಾ ಸಾಮರ್ಥ್ಯಗಳನ್ನೂ ಮತ್ತು ಸಾಧನೆಗಳನ್ನು ಹೆಚ್ಚಿಸುವುದಾಗಿದೆ.
ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.
- 2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು.
- ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು.
- ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.
- 2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು.
ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು.
ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ. ಸದ್ಯ ಕರ್ನಾಟಕದಲ್ಲಿ ರಜಾ ಅವಧಿಯಲ್ಲೂ ಬಿಸಿಯೂಟ ಯೋಜನೆ ಜಾರಿಯಲ್ಲಿದೆ.