ಕಳೆದ ವರ್ಷದಂತೆ ಈ ವರ್ಷವೂ ಕೂಡ 'ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್' ಮೂಲಕ ದ್ವೀತಿಯ ಪಿಯುಸಿ ಪರೀಕ್ಷೆಗಳನ್ನು ಬಹಳಷ್ಟು ವ್ಯವಸ್ಥಿತವಾಗಿ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಮಾರ್ಚ್ ಒಂದರಿಂದ ಆರಂಭವಾಗುವ ಈ ಬಾರಿಯ ದ್ವೀತಿಯ ಪಿಯುಸಿ ಪರೀಕ್ಷೆಗೆ 6.5 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ರಾಜಯದ 996 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.

ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಅಳವಡಿಸಿಕೊಂಡ ಬಳಿಕ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಬಿದ್ದಂತಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿ ನಕಲು, ಸೇರಿದಂತೆ ಇನ್ನಿತರ ಅಕ್ರಮಗಳು ನಡೆದಿಲ್ಲ. ಆದ್ದರಿಂದ ಈ ಬಾರಿಯೂ ಅದೇ ಕ್ರಮ ಅನುಸರಿಸಲು ಇಲಾಖೆ ನಿರ್ಧರಿಸಿದೆ.
ಈ ವರ್ಷವೂ ಸಿಸಿ ಕ್ಯಾಮೆರಾ
ಕಳೆದ ವರ್ಷದಂತೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲೇ ಪರೀಕ್ಷೆ ನಡೆಯಲಿದ್ದು, ಈ ವರ್ಷ ಇನ್ನು ಹೆಚ್ಚಿನ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕಳೆದ ವರ್ಷ ಶೇ.80 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಈ ವರ್ಷ ಸಂಚಿತ ನಿಧಿ ಬಳಸಿ ಶೇ.100 ಪೂರ್ಣಗೊಂಡಿದೆ.
250 ಕೇಂದ್ರಗಳಲ್ಲಿರುವ ಖಜಾನೆಗಳಲ್ಲಿ ಸಂಪೂರ್ಣವಾಗಿ ಕ್ಯಾಮರಾ ಅಳವಡಿಸಿದ್ದು, ಇಲ್ಲಿ ಯಾರೇ ಚಲಿಸಿದರೂ ಜಿಲ್ಲಾಧಿಕಾರಿಗೆ ಸಂದೇಶ ರವಾನೆಯಾಗಲಿದೆ. ಖಜಾನೆಗೆ ಸಿಸಿ ಕ್ಯಾಮರಾ, ಬಯೋಮೆಟ್ರಿಕ್, ಹೈ ಅಲರ್ಟ್ನಂತಹ ಕ್ರಮ ಅನುಸರಿಸಲಾಗುತ್ತಿದೆ. ಅತಿ ಹೆಚ್ಚು ಕ್ಯಾಮೆರಾಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ಅಳವಡಿಸಲಾಗಿದ್ದು, ಯಾವುದೇ ತೊಂದರೆಗಳು ಸಂಭವಿಸದಂತೆ ನಿಗಾ ವಹಿಸಲಾಗಿದೆ.
ಚುನಾವಣೆಯಲ್ಲಿ ಶಿಕ್ಷಣ ಸಚಿವರು
ಈ ಬಾರಿಯ ಪರೀಕ್ಷೆಗಳ ಸಂಪೂರ್ಣ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ವಿಧಾನಸಭೆ ಚುನಾವಣೆ ಕೂಡ ಇರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಪ್ರಚಾರದಲ್ಲಿ ನಿರತರಾಗಿರುತ್ತಾರೆ. ಅಲ್ಲದೆ, ನೀತಿ ಸಂಹಿತೆ ಅಡ್ಡಿಯಾಗುವುದರಿಂದ ಪರೀಕ್ಷೆ ನಡೆಸುವ ಸಂಪೂರ್ಣ ಜವಾಬ್ದಾರಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪದವಿ ಪೂರ್ವ ಶಿಕ್ಷಣ ನಿರ್ದೇಶಕರ ಮೇಲಿದೆ.


Click it and Unblock the Notifications











