ಪಿಯು ಉಪನ್ಯಾಸಕರ ನೇಮಕಾತಿ ವಿಚಾರಕ್ಕೆ ಧರಣಿ ಕುಳಿತಿರುವ ಉಪನ್ಯಾಸಕರನ್ನು ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು ಪಿಯುಸಿ ಉಪನ್ಯಾಸಕರಾಗಿ ಆಯ್ಕೆಗೊಂಡಿರುವ ಮತ್ತು ಕೌನ್ಸೆಲಿಂಗ್ ಸಹ ಪೂರ್ಣವಾಗಿರುವ ಉಪನ್ಯಾಸಕರು ನೇಮಕಾತಿ ಆದೇಶಕ್ಕಾಗಿ ಧರಣಿ ಕೂತಿರುವ ವಿಚಾರ ನನಗೆ ತಿಳಿದುಬಂದಿದೆ.
ನಾನು ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಈ ಮೂಲಕ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸುತ್ತೇನೆ. ನನ್ನ ಪ್ರತಿ ಪ್ರಯತ್ನ ಈ ಎಲ್ಲಾ ನೂತನ ಉಪನ್ಯಾಸಕರಿಗೆ ತಿಳಿದಿದೆ. ಆರ್ಥಿಕ ಇಲಾಖೆಯ ನಿರ್ಬಂಧ ಇದ್ದರೂ ಸಹ ಇವರೆಲ್ಲರಿಗೂ ಕೌನ್ಸೆಲಿಂಗ್ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗಿದೆ. ಈಗ ಕಾಲೇಜುಗಳು ಪ್ರಾರಂಭವಾದ ತಕ್ಷಣ ನೇಮಕಾತಿ ಆದೇಶ ಕೊಡಲಾಗುವುದು ಎಂದು ಈ ಎಲ್ಲಾ ನೂತನ ಉಪನ್ಯಾಸಕರುಗಳಿಗೆ ಮುಂಚೆಯೇ ತಿಳಿಸಲಾಗಿತ್ತು ಎಂದಿದ್ದಾರೆ.
ಉಪನ್ಯಾಸಕರಾಗಿ ಆಯ್ಕೆಯಾಗಿ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ದೊರೆಯದಿದ್ದರೆ ಆ ಆಯ್ಕೆ ಪಟ್ಟಿ ರದ್ದಾಗುತ್ತದೆ ಎಂಬ ಆತಂಕ ಈ ನೂತನ ಉಪನ್ಯಾಸಕರಿಗಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.