ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶೌರ್ಯ, ಮೌಲ್ಯಗಳು, ಕರ್ತವ್ಯ ಪ್ರಜ್ಞೆ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡಿಸಲು ರಾಜಸ್ಥಾನ ಸರ್ಕಾರ ವಿಶಿಷ್ಟ ಪ್ರವಾಸ ಕೈಗೊಳ್ಳುವಂತೆ ಕಾಲೇಜುಗಳಿಗೆ ಸೂಚಿಸಿದೆ.
ಉದಯಪುರದಲ್ಲಿರುವ ಪ್ರತಾಪ್ ಗೌರವ ಕೇಂದ್ರಕ್ಕೆ ಶೈಕ್ಷಣಿಕ ಪ್ರವಾಸ ಆಯೋಜಿಸುವಂತೆ ರಾಜಸ್ಥಾನ ಸರ್ಕಾರ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸ್ಥಾಪಿಸಿರುವ ಪ್ರತಾಪ್ ಗೌರವ ಕೇಂದ್ರವನ್ನು ರಾಷ್ಟ್ರೀಯ ಯಾತ್ರಾ ಮತ್ತು ಪ್ರವಾಸಿ ಸ್ಥಳ ಎಂದು ಗುರುತಿಸಲಾಗಿದೆ. ಹೀಗಾಗಿ ಈ ಸ್ಥಳಕ್ಕೆ ಶೈಕ್ಷಣಿಕ ಪ್ರವಾಸವನ್ನು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆಯೋಜಿಸಬೇಕು ಎಂದು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.
ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಎಲ್ಲ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಿದೆ. ಈ ಪ್ರವಾಸದಿಂದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶೌರ್ಯ, ಮೌಲ್ಯಗಳು, ಕರ್ತವ್ಯ ಪ್ರಜ್ಞೆ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡುತ್ತದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಾಪ್ ಗೌರವ ಕೇಂದ್ರ
100 ಕೋಟಿ ರೂ. ವೆಚ್ಚದಲ್ಲಿ ಪ್ರತಾಪ್ ಗೌರವ ಕೇಂದ್ರವನ್ನು ನಿರ್ಮಿಸಲಾಗಿದ್ದು, ಮಹಾರಾಣಾ ಪ್ರತಾಪ್ ಅವರ ಶೌರ್ಯ ಮತ್ತು ಆಡಳಿತದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ 57 ಅಡಿ ಎತ್ತರದ ಮಹಾರಾಣಾ ಪ್ರತಾಪ್ ಅವರ ಪ್ರತಿಮೆಯನ್ನು ಸಹ ಪ್ರತಿಷ್ಠಾಪಿಸಲಾಗಿದೆ. ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಮೋಹನ್ ಭಾಗವತ್ ಅವರು 2008ರಲ್ಲಿ ಈ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2016ರಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಾಗಿತ್ತು.
ಕಾಂಗ್ರೆಸ್ ಆಕ್ಷೇಪ
ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಆರ್ಎಸ್ಎಸ್ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆಯೂ ಹೇರುತ್ತಿದೆ. ಪ್ರತಾಪ್ ಗೌರವ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಉದ್ದೇಶ ಅರ್ಥಹೀನ ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ 220 ಸರ್ಕಾರಿ ಕಾಲೇಜುಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಸುತ್ತೋಲೆ ಜಾರಿಯಾದರೆ ಪ್ರತಾಪ್ ಗೌರವ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಟ್ರಸ್ಟ್ಗೆ ಪ್ರತಿ ವರ್ಷ ₹4.5 ಕೋಟಿ ಆದಾಯ ದೊರೆಯುತ್ತದೆ. ಇದು ಪರೋಕ್ಷವಾಗಿ ಆರ್ಎಸ್ಎಸ್ಗೆ ದೊರೆಯುತ್ತದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ.


Click it and Unblock the Notifications











