ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮುಂದಿನ ವರ್ಷ ಅಂದರೆ ಏಪ್ರಿಲ್ನಿಂದ "ಸೈನಿಕ" ಶಾಲೆಯನ್ನು ತೆರೆಯಲು ಮುಂದಾಗಿದೆ. ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳಾಗಬಯಸುವ ಮಕ್ಕಳಿಗೆ ಇಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ರಾಜ್ಯದೆಲ್ಲೆಡೆ ಆರ್ಎಸ್ಎಸ್ ಆಡಳಿತದ ಶಿಕ್ಷಣ ಸಂಸ್ಥೆಗಳಿದ್ದು, ಮುಂದಿನ ವರ್ಷದಲ್ಲಿ "ಸೈನಿಕ" ಶಾಲೆಯನ್ನು ತೆರೆಯುವ ಮೂಲಕ ಮಹತ್ತರ ಹೆಜ್ಜೆಯನ್ನು ಇಡಲು ಮುಂದಾಗಿದೆ.
ವಿದ್ಯಾಭಾರತಿಯು ಆರ್ಎಸ್ಎಸ್ ಸೈನಿಕ ಶಾಲೆಯನ್ನು ನಡೆಸಲಿದ್ದು, ಆರ್ಎಸ್ಎಸ್ನ ಮಾಜಿ ಸರಸಂಘಚಾಲಕ್ ರಾಜೇಂದ್ರ ಸಿಂಗ್ ಅವರ ಹೆಸರಿನಲ್ಲಿ (ರಜ್ಜು ಭಯ್ಯಾ) ಸೈನಿಕ ಶಾಲೆಯನ್ನು ತೆರೆಯಲು ತೀರ್ಮಾನಿಸಲಾಗಿದೆ. ಉತ್ತರ ಪ್ರದೇಶದ ಬುಲಂದ್ಶೆಹರ್ ರಜ್ಜು ಭಯ್ಯಾ ಅವರ ಹುಟ್ಟೂರಾಗಿರುತ್ತದೆ. ಆದ್ದರಿಂದ ಅಲ್ಲಿಯೇ ಆರ್ಎಸ್ಎಸ್ ಸೈನಿಕ ಶಾಲೆ ತೆರೆಯಲು ತೀರ್ಮಾನಿಸಲಾಗಿದೆ.
ಶಾಲೆಯು ಮುಂದಿನ ವರ್ಷ ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಶಾಲೆಯ ನಿರ್ಮಾಣ ಕಾರ್ಯವು ಪ್ರಾರಂಭಗೊಂಡಿದೆ. ಸೈನಿಕ ಶಾಲೆಯು ಕೇಂದ್ರೀಯ ಶಿಕ್ಷಣದ ಪಠ್ಯಕ್ರಮವನ್ನು ಅನುಸರಿಸುತ್ತದೆ. ಪ್ರಸ್ತುತ ಆರನೇ ತರಗತಿಯಿಂದ 12ನೇ ತರಗತಿಯ ವರೆಗೆ ತರಗತಿಗಳು ನಡೆಯಲಿವೆ.
ದೇಶದಲ್ಲಿ ಮೊದಲ ಭಾರಿಗೆ ಈ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಒಂದು ವೇಳೆ ಈ ಪ್ರಯತ್ನವು ಉತ್ತಮ ರೀತಿಯಲ್ಲಿ ನೆರವೇರಿದ್ದಲ್ಲಿ ದೇಶದ ಇತರೆ ಭಾಗಗಳಿಗೂ ವಿಸ್ತರಿಸಲಾಗುವುದು ಉಚ್ಛ ಶಿಕ್ಷಾ ಸಂಸ್ಥಾನದ ಪ್ರಾದೇಶಿಕ ಸಂಚಾಲಕ ಅಜಯ್ ಗೋಯಲ್ ತಿಳಿಸಿದ್ದಾರೆ. ವಿದ್ಯಾ ಭಾರತಿಯು ದೇಶಾದ್ಯಂತ 20,000 ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದೆ.
ಸೈನಿಕ ಶಾಲೆಯ ಪ್ರವೇಶಾತಿಗೆ ಮುಂದಿನ ತಿಂಗಳಿನಿಂದ ಅರ್ಜಿಗಳನ್ನು ಪಡೆಯಲು ಆರಂಭಿಸಲಾಗುತ್ತಿದ್ದು. ಆರನೇ ತರಗತಿಗೆ ಅಂದರೆ ಮೊದಲ ಬ್ಯಾಚ್ಗೆ ಒಟ್ಟು 160 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಿದ್ದು, ಅದರಲ್ಲಿ ವಿಶೇಷವಾಘಿ ಹುತಾತ್ಮ ಯೋಧರ ಕುಟುಂಬದ ಮಕ್ಕಳಿಗೆ 56 ಸೀಟುಗಳನ್ನು ಮೀಸಲಿಡಲಾಗುವುದು ಎಂದು ಅಜಯ್ ಮಾಹಿತಿ ನೀಡಿದ್ದಾರೆ.
ಶಾಲೆಯು ಮಕ್ಕಳಿಗೆ ಸೇನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುವುದು ಹಾಗೂ ದೇಶದ ಸೇವೆಗೆ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ತಯಾರಿ ನಡೆಸುವುದು ಪ್ರಮುಖ ಉದ್ಛೇಶವಾಗಿದೆ.
ದೇಶದಲ್ಲಿ ಸೇನೆ,ನೌಕಾಪಡೆ ಮತ್ತು ವಾಯುಪಡೆಗೆ ಅಧಿಕಾರಿಗಳ ಕೊರತೆ ಇದೆ. ಅಧಿಕಾರಿ ಹುದ್ದೆಗಳಿಗೆ ಸೇರಲು ಕೇಳಲಾಗಿರುವ ಅರ್ಹತಾ ಮಾನದಂಡಗಳನ್ನು ಅನೇಕ ಅಭ್ಯರ್ಥಿಗಳು ಹೊಂದಿರುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳಿಗೆ ಸಣ್ಣವಯಸ್ಸಿನಿಂದಲೇ ತರಬೇತಿಯನ್ನು ಉದ್ದೇಶದಿಂದ ಈ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ.
ಕಳೆದ ವರ್ಷ ಆಗಸ್ಟ್ 24ರಂದು 20 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ನಿವೃತ್ತ ಸೇನಾಧಿಕಾರಿ ರಾಜ್ಪಾಲ್ ಸಿಂಗ್ ಎಂಬವರು ಈ ಜಾಗವನ್ನು ನೀಡಿರುತ್ತಾರೆ. ರಾಜ್ಪಾಲ್ ಸಿಂಗ್ ಜನಕಲ್ಯಾಣ ಸೇವಾ ಸಮಿತಿಯನ್ನು ಸ್ಥಾಪಿಸಿ, ಅದಕ್ಕೆ ಭೂಮಿ ವರ್ಗಾವಣೆ ಮಾಡಲಾಗಿದೆ. ಮೂರು ಮಳಿಗೆ ತರಗತಿಗಳಿಗೆ, ಮೂರು ಮಳಿಗೆಯ ವಸತಿ ವ್ಯವಸ್ಥೆ, ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೂ ಉಳಿದುಕೊಳ್ಳುವ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ದೊಡ್ಡ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ. ಒಟ್ಟಾರೆ ಅಂದಾಜು 40 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.