ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಕಡ್ಡಾಯವಾಗಿ ಪಾಸ್ ಆಗಲೇಬೇಕು ಎಂಬ ನೂತನ ನಿಯಮಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ.
ಶಿಕ್ಷಣದಲ್ಲಿ ಗುಣಮಟ್ಟ ಸಾಧಿಸುವ ಉದ್ದೇಶದಿಂದ ಆರ್ ಟಿ ಇ ನೀತಿಯಲ್ಲಿ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ಶಾಲೆಗಳಲ್ಲಿ ಅನುತ್ತೀರ್ಣರಾದರೆ ಮುಂದಿನ ತರಗತಿಗೆ ಪ್ರವೇಶ ಹೊಂದುವ ಹಾಗಿಲ್ಲ.
2010 ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಂತೆ ಐದನೇ ಮತ್ತು ಎಂಟನೇ ತರಗತಿಯ ಯಾವ ಮಕ್ಕಳನ್ನು ಅನುತ್ತೀರ್ಣಗೊಳಿಸಲು ಅವಕಾಶವಿಲ್ಲ. ಶಾಲೆಗೆ ಸೇರಿದ ಪ್ರತಿ ಮಗುವು ಮುಂದಿನ ತರಗತಿಗೆ ಬಡ್ತಿ ಹೊಂದುತ್ತ ಹೋಗಬೇಕಿತ್ತು.
ಹೊಸ ಆರ್ ಟಿ ಇ ನೀತಿಯಂತೆ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಮರು ಪರೀಕ್ಷೆ ನಡೆಸಲಾಗುತ್ತದೆ. ಆ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ಹೋಗಬಹುದು. ಆದರೆ ಮರು ಪರೀಕ್ಷೆಯಲ್ಲೂ ಪಾಸ್ ಆಗದ ವಿದ್ಯಾರ್ಥಿಗಳನ್ನು ಅದೇ ತರಗತಿಯಲ್ಲಿ ಉಳಿಸಲಾಗುವುದು.
ಆರ್ ಟಿ ಇ ಹೊಸ ನಿಯಮಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಳೆ ನಿಯಮದಿಂದಾಗಿ ಮಕ್ಕಳು ಕಲಿಯದಿದ್ದರೂ ತೇರ್ಗಡೆಯಾಗುತ್ತಿದ್ದರು. ಇದರಿಂದಾಗಿ ಮುಂದಿನ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದರೆ ಈ ನಿಯಮ ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದ ಶಿಕ್ಷಕರೊಬ್ಬರ ಮಾತು.
ಆರ್ ಟಿ ಇ
ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ 21A ಕಲಮಿನಡಿ ಜಾರಿಗೊಳಿಸಲಾಗಿದೆ.
ಏಪ್ರಿಲ್ 1, 2010 ರಂದು ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವ ಮೂಲಭೂತ ಹಕ್ಕನು ನೀಡಿದ 135 ದೇಶಗಳಲ್ಲಿ ಭಾರತವೂ ಒಂದಾಯಿತು.
ಸಂಪುಟವು ಈ ಮಸೂದೆಯನ್ನು ಜುಲೈ 2, 2009 ರಂದು ಅನುಮೋದಿಸಿತು. ನಂತರ 20 ಜುಲೈ 2009 ರಂದು ರಾಜ್ಯಸಭೆ ಮತ್ತು 4 ಆಗಸ್ಟ್ 2009 ರಂದು ಲೋಕಸಭೆಯಿಂದ ಅಂಗೀಕರಿಸಲಾಯಿತು. ರಾಷ್ಟ್ರಪತಿಯ ಸಮ್ಮತಿಯ ನಂತರ ಸೆಪ್ಟೆಂಬರ್ 3, 2009 ರಂದು ಇದನ್ನು ಕಾನೂನು ಎಂದು ಘೋಷಿಸಿ ಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಎಂದು ಹೆಸರಿಸಲಾಯಿತು.