ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವೇದಪಾಠ ಶಾಲೆಗಳನ್ನು ತೆರೆಯಲು ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮುಂದಾಗಿದೆ.
ಸಂಸ್ಕೃತ ಭಾಷೆಯೂ ಸೇರಿದಂತೆ ವೇದ, ವೇದಾಂಗಗಳ ಅಧ್ಯಯನ ಅವಕಾಶ ಎಲ್ಲಾ ಸಮುದಾಯಕ್ಕೂ ಸಿಗಬೇಕೆಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ಮೂಲಕ ಸರಕಾರದ ನೇತೃತ್ವದಲ್ಲೇ ಎಲ್ಲ ಜಾತಿ, ಸಮುದಾಯದ ಜನ ಸಂಸೃತ ವೇದಪಾಠ ಕಲಿತು ಅರ್ಚಕರು, ಪುರೋಹಿತರಾಗುವ ಅವಕಾಶ ನೀಡಲಾಗುತ್ತಿದೆ.

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಅರ್ಚಕರಲ್ಲಿ ಬಹುತೇಕರು ವೇದ ಮತ್ತು ಆಗಮ ಶಾಸ್ತ್ರದ ಪರಿಣತಿ ಹೊಂದಿಲ್ಲ ಎಂಬ ದೂರಿನ ಹಿನ್ನೆಲೆ ಮತ್ತು ದೇವಾಲಯಗಳಿಗೆ ಬೇಕಾದಷ್ಡು ಪ್ರಮಾಣದ ಪರಿಣತ ಅರ್ಚಕರು ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.
ರಾಜ್ಯದ ನಾಲ್ಕು ಕಡೆ ಸರಕಾರದ ವತಿಯಿಂದಲೇ ಸಂಸ್ಕೃತ ವೇದಪಾಠ ಶಾಲೆಗಳು ಆರಂಭವಾಗಲಿದೆ. ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಮಂಗಳೂರು ತಾಲೂಕಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ ಮತ್ತು ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಗಳನ್ನು ಆರಿಸಲಾಗಿದೆ.
ಈಗಾಗಲೇ ಈ ಸಂಬಂಧ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ, ಮುಜರಾಯಿ ಇಲಾಖೆಗೆ ಸಲ್ಲಿಸಲಾಗಿದ್ದು, ಇಲಾಖೆ ಆಯಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದೆ.
ಸಂಸ್ಕೃತ ವೇದಪಾಠ ಶಾಲೆ ಆರಂಭಿಸುವ ನಿಟ್ಟಿನಲ್ಲಿ ಅಧಿಸೂಚಿತ ಸಂಸ್ಥೆಗಳಲ್ಲೂ ಉಪ್ರಕ್ರಮ ಆರಂಭಗೊಂಡಿದೆ. ಈ ವೇದಪಾಠ ಶಾಲೆಗಳಲ್ಲಿ ಯಾವುದೇ ಜಾತಿಯ ಆಸಕ್ತ ವಿದ್ಯಾರ್ಥಿಗಳು ಸೇರ್ಪಡೆಯಾಗಿ ವೇದ, ಆಗಮ ಶಾಸ್ತ್ರಗಳನ್ನು ಕಲಿಯಬಹುದು. ಈ ಮೂಲಕ ಬಹುದೊಡ್ಡ ಸಾಮಾಜಿಕ ಕ್ರಾಂತಿಗೆ ಇಲಾಖೆ ಮುಂದಡಿ ಇಟ್ಟಿದೆ.
ಸರಕಾರದ ವತಿಯಿಂದಲೇ ನಡೆಸಲಾಗುವ ವೇದಪಾಠ ಶಾಲೆ ಇದು. ಆಯಾ ಅಧಿಸೂಚಿತ ದೇವಾಲಯಗಳ ನಿಧಿಯಿಂದ ನಿರ್ವಹಿಸಬೇಕಾಗುತ್ತದೆ. ಇಲ್ಲಿ ಕಲಿಯಲು ಬರುವ ಅಭ್ಯರ್ಥಿಗಳಲ್ಲಿ ಜಾತಿ ಭೇದವಿಲ್ಲ. ಆಸಕ್ತರು ಅರ್ಜಿ ಸಲ್ಲಿಸಬಹುದು. ವೇದ ಮತ್ತು ಆಗಮ ಪಾಠಗಳನ್ನು ಸಂಸ್ಕೃತ ಭಾಷೆಯಲ್ಲೇ ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ಕಲಿತವರು ಅರ್ಚಕರಾದರೆ ಭವಿಷ್ಯದಲ್ಲಿ ಅರ್ಚಕರ ಅಭಾವ ನೀಗಲಿದೆ. ಮಾತ್ರವಲ್ಲದೆ ಪ್ರಾವೀಣ್ಯತೆ ಪಡೆದ ಅರ್ಚಕರು ಸಿಗುವಂತಾಗುತ್ತಾರೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಎನ್.ಕೆ.ಜಗನ್ನಿವಾಸ ರಾವ್ ಹೇಳಿದ್ದಾರೆ.


Click it and Unblock the Notifications











