ಭಾರತೀಯ ಸ್ಟೇಟ್ ಬ್ಯಾಂಕ್ ನ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಲ್ಲದಿದ್ದರೆ ದಂಡ ಹಾಕುವ ನಿಯಮಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಸಲುವಾಗಿ ಈಗಿರುವ ನಿಯಮವನ್ನು ಪರಿಷ್ಕರಿಸಲು ಎಸ್ ಬಿ ಐ ಮುಂದಾಗಿದೆ.
ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳುವ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ವಿನಾಯ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಎಸ್ಬಿಐನ ನಿರ್ದೇಶಕ (ರಾಷ್ಟ್ರೀಯ ಬ್ಯಾಂಕಿಂಗ್ ಗ್ರೂಪ್) ರಜನೀಶ್ ಕುಮಾರ್ ಹೇಳಿದ್ದಾರೆ.
ಉಳಿತಾಯ ಖಾತೆಗಳಲ್ಲಿ ತಿಂಗಳ ಕನಿಷ್ಠ ಮೊತ್ತ ಇರಿಸಲು ವಿಫಲರಾಗುವ ಗ್ರಾಹಕರಿಂದ ಶುಲ್ಕ ವಸೂಲಿ ಮಾಡುವುದಕ್ಕೆ ಏಪ್ರಿಲ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಆ ಪ್ರಕಾರ ಪ್ರತಿಯೊಬ್ಬ ಗ್ರಾಹಕರು ತಮ್ಮ ಖಾತೆಯಲ್ಲಿ ಬ್ಯಾಂಕ್ ನಿಗದಿ ಪಡಿಸಿದ್ದ ಮೊತ್ತವನ್ನು ಉಳಿಸಿಕೊಳ್ಳಬೇಕು ಇಲ್ಲವಾದಲ್ಲಿ ಶುಲ್ಕವನ್ನು ವಿಧಿಸಿಲಾಗುತ್ತದೆ.
ಖಾತೆಗಳಲ್ಲಿ ಕಾಯ್ದುಕೊಳ್ಳಬೇಕಾದ ತಿಂಗಳ ಸರಾಸರಿ ಮೊತ್ತವನ್ನು (ಎಂಎಬಿ) ಮಹಾನಗರಗಳಲ್ಲಿ ₹ 5,000ಕ್ಕೆ ನಿಗದಿಪಡಿಸಲಾಗಿದೆ. ಖಾತೆಯಲ್ಲಿನ ಮೊತ್ತವು 'ಎಂಎಬಿ'ಗಿಂತ ಶೇ 75ರಷ್ಟು ಕಡಿಮೆಯಾದರೆ ₹ 100 ಮತ್ತು ಜಿಎಸ್ಟಿ, ಶೇ 50ರಷ್ಟು ಕಡಿಮೆಯಾದರೆ ₹ 50 ಮತ್ತು ಜಿಎಸ್ಟಿ ವಸೂಲಿ ಮಾಡಲಾಗುತ್ತಿದೆ.
ಮೆಟ್ರೋ ನಗರಗಳಲ್ಲಿ ಕನಿಷ್ಠ 5000 ರು., ಇತರೆ ನಗರಗಳಲ್ಲಿ 3000 ರು., ಉಪ ನಗರಗಳಲ್ಲಿ 2000 ರು. ಹಾಗೂ ಗ್ರಾಮೀಣ ಭಾಗದಲ್ಲಿನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 1000 ರು. ಹಣ ಉಳಿತಾಯ ಖಾತೆಗಳಲ್ಲಿರಲೇಬೇಕು
ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಮತ್ತು ಜನ- ಧನ ಖಾತೆಗಳನ್ನು (ಪಿಎಂಜೆಡಿವೈ) ಕನಿಷ್ಠ ಮೊತ್ತ ಹೊಂದಿರಬೇಕಾದ ನಿಬಂಧನೆಯಿಂದ ವಿನಾಯ್ತಿ ನೀಡಲಾಗಿದೆ. ಈಗ ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಈ ಶುಲ್ಕದಿಂದ ವಿನಾಯ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಎಸ್ಬಿಐನ ನಿರ್ದೇಶಕರು ತಿಳಿಸಿದ್ದಾರೆ
ಐದು ವರ್ಷಗಳ ನಂತರ ಈ ಶುಲ್ಕ ವಿಧಿಸುವ ನಿಯಮ ಜಾರಿಗೆ ಬಂದ ನಂತರ ಸಾರ್ವಜನಿಕರಿಂದ ಅನೇಕ ಆಕ್ಷೇಪ, ದೂರುಗಳು ಬರುತ್ತಿವೆ. ಗ್ರಾಹಕರಿಗೆ ಹೇರಲಾಗುತ್ತಿರುವ ದುಬಾರಿ ಶುಲ್ಕ ರದ್ದುಪಡಿಸಬೇಕು ಎಂದು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕೂಡ (ಯುಎಫ್ಬಿಯು) ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಒತ್ತಾಯಿಸಿದೆ.