ರಾಜ್ಯದಲ್ಲಿ ಸೆಪ್ಟೆಂಬರ್ 21 ರಿಂದ ಶಾಲೆಗಳು ಆರಂಭವಾಗಲಿವೆ ಆದರೆ ತರಗತಿಗಳು ನಡೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವವರೆಗೂ ಶಾಲೆಗಳಲ್ಲಿ ತರಗತಿಗಳನ್ನು ಆರಂಭ ಮಾಡುತ್ತಿಲ್ಲ. ಈಗ ಅನುಮತಿ ಸಿಕ್ಕಿರುವುದು ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಮಾತ್ರ. ಅದು ಪೋಷಕರ ಅನುಮತಿ ಮೇರೆಗೆ ಸೆಪ್ಟೆಂಬರ್ 21 ರಿಂದ 9, 10, 11, 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿ ಸ್ಪಷ್ಟೀಕರಣ ತೆಗೆದುಕೊಳ್ಳಬಹುದು.

ಎಲ್ಲೆಡೆಯೂ ಶಾಲೆ ಮತ್ತು ತರಗತಿಗಳ ಆರಂಭ ಯಾವಾಗ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಆದರೆ ಶಾಲೆಯನ್ನು ಮತ್ತೆ ಆರಂಭಿಸಲು ಕೇಂದ್ರದ ಅನುಮತಿ ಬೇಕು. ಅನುಮತಿ ನೀಡಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಾಲೆಗೆ ಬರಲು ವಿದ್ಯಾರ್ಥಿಗಳು ಉತ್ಸಾಹಕರಾಗಿದ್ದಾರೆ. ಆದರೆ ಪೋಷಕರಿಗೆ ಇನ್ನೂ ಆತಂಕವಿದೆ. ಹೀಗಾಗಿ ಪೋಷಕರಿಂದ ಕೂಡ ಒಂದು ಅನುಮತಿ ಪತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಈ ವರ್ಷ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ತೆಗೆದುಕೊಳ್ಳುಬಾರದೆಂದು ಆದೇಶ ಹೊರಡಿಸಿದ್ದೇವೆ. ಖಾಸಗಿಯವರು ಕೊರೋನಾ ಕಾರಣದಿಂದಾಗಿ ಸಂಪೂರ್ಣ ಶುಲ್ಕ ತೆಗೆದುಕೊಳ್ಳಬಾರದು. ಒಂದು ಕಂತಿನ ಶುಲ್ಕ ತೆಗೆದುಕೊಳ್ಳಲು ಅನುಮತಿ ಇದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವರ್ಗಾವಣೆಗೆ ಖಾಸಗಿ ಶಾಲೆಯ ವರ್ಗಾವಣೆ ಪತ್ರ ಕಡ್ಡಾಯವಲ್ಲ. ಖಾಸಗಿ ಅವರ ವರ್ಗಾವಣೆ ಪತ್ರ ಕೊಡದಿದ್ದರೆ ಬಿಇಓ ಮೂಲಕವೇ ಪಡೆಯಬಹುದು ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು ಎಂದು ಅವರು ತಿಳಿಸಿದ್ದಾರೆ.


Click it and Unblock the Notifications











