ಕೊರೋನಾ ಪರಿಸ್ಥಿತಿ ತಿಳಿ ಆದಮೇಲೆ ಪಿಯುಸಿ ಇಂಗ್ಲಿಷ್ ಹಾಗೂ ಹತ್ತನೇ ತರಗತಿ ಪರೀಕ್ಷೆ ನಡೆಸಲಾಗುವುದು. ಹತ್ತನೇ ತರಗತಿ ಹಾಗೂ ಪಿಯು ಪರೀಕ್ಷೆ ದಿನಾಂಕ ನಾನೇ ಅಧಿಕೃತವಾಗಿ ಪ್ರಕಟಿಸುತ್ತೇನೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಮತ್ತು ಪೋಷಕರು ವದಂತಿಗಳಿಗೆ ಕಿವಿ ಕೊಡ್ಬೇಡಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಏಪ್ರಿಲ್ 14ರ ಬಳಿಕ ಲಾಕ್ಡೌನ್ ವಿಸ್ತರಣೆಯಾಗುವ ಸಂಭವ ಇರುವುದರಿಂದ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಇಲಾಖೆಯಿಂದ ಕೈಗೊಂಡಿರುವ ಕ್ರಮದ ಬಗ್ಗೆ ತಮ್ಮ ಫೇಸ್ಬುಕ್ ಲೈವ್ ಮೂಲಕ ಮಾಹಿತಿ ನೀಡಿದ ಅವರು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವ ಸಂಬಂಧ ಅನೇಕ ಪೋಷಕರು ಪ್ರಶ್ನೆ ಕೇಳಿದ್ದಾರೆ. ಪೂರಕ ಪರೀಕ್ಷೆ ನಡೆಸುವ ಸಂಬಂಧ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ 7 ರಿಂದ 10 ದಿನಗಳ ಪುನರ್ ಮನನ ಅವಧಿಯನ್ನು ಕಲ್ಪಿಸಿ ಪರೀಕ್ಷೆ ಎದುರಿಸುವ ಮನಃಸ್ಥಿತಿಗೆ ಬರುವಂತೆ ಮಾಡಲು ಕ್ರಮಕೈಗೊಳ್ಳಲಾಗುವುದು. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಬಳಿಕ ಪೂರಕ ಪರೀಕ್ಷೆಗಳನ್ನು ನಡೆಸಬೇಕಾಗಿದ್ದು, ಇದಕ್ಕೂ ಸಹ ಆವಶ್ಯಕ ಸಮಯವನ್ನು ದೊರಕಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪರೀಕ್ಷೆಗಳನ್ನು ನಡೆಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ಪುನರ್ ಮನನ ಕಾರ್ಯಕ್ರಮ ಮಾಡುವ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಇದೇ ರೀತಿ ಎಲ್ಲ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಅನುಕೂಲವಾಗುವಂತೆ ಮುಂದಿನ ವಾರದಲ್ಲಿ ಯೂಟ್ಯೂಬ್ ಚಾನೆಲ್ ಸಹ ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.
ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ನಂತರ ಪೂರಕ ಪರೀಕ್ಷೆಗೆ ಚಿಂತನೆ ಮಾಡಲಾಗಿದೆ. ರಜೆ ಸಮಯದಲ್ಲಿ ಹತ್ತನೇ ತರಗತಿ ಮಕ್ಕಳು ಏನ್ ಮಾಡ್ಬೇಕು ಅನ್ನೋದ್ರ ಬಗ್ಗೆ ಸೂಚನೆ ಪ್ರಕಟಿಸಲಾಗುವುದು. ಸೋಮವಾರ ಮಧ್ಯಾಹ್ಯ ರಾಜ್ಯದ ಎಲ್ಲಾ ಡಿಡಿಪಿಐ ಹಾಗೂ ಪ್ರಾಂಶುಪಾಲರ ಜೊತೆ ವೀಡಿಯೋ ಕಾನ್ಪರೆನ್ಸ್ ಸಭೆ ಕರೆಯಲಾಗಿದೆ. ಶಿಕ್ಷಣ ಇಲಾಖೆಯಿಂದ ಯೂಟ್ಯೂಬ್ ಚಾನೆಲ್ ಮಾಡಿ, ಅದರ ಮೂಲಕ ಮಕ್ಕಳಿಗೆ ಎಲ್ಲಾ ಅಂಶಗಳು ಸಿಗಲಿವೆ. ಉತ್ಸಾಹದ ರೀತಿಯ ಕಾರ್ಯಕ್ರಮದ ರೂಪಿಸಲಾಗುವುದು. ಆಕಾಶವಾಣಿ ದೂರವಾಣಿ ಮೂಲಕ ಹತ್ತನೇ ತರಗತಿ ಮಕ್ಕಳಿಗೆ ಪುನರ್ ಮನನ ಕಾರ್ಯಕ್ರಮ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದರು.
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯವನ್ನು ಕೋವಿಡ್ 19 ಭೀತಿ ತಿಳಿಯಾದ ನಂತರವೇ ನಡೆಸಲಿದ್ದೇವೆ. ಈ ಬಗ್ಗೆ ವಿದ್ಯಾರ್ಥಿಗಳು, ಪಾಲಕ, ಪೋಷಕರಿಗೆ ಆತಂಕ ಅಥವಾ ಗೊಂದಲ ಬೇಡ. ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ನಾನೇ ಪ್ರಕಟಿಸಲಿದ್ದೇನೆ ಹಾಗೆ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮೌಲ್ಯಮಾಪನ ಕಾರ್ಯವನ್ನು ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಪಿಯು ಇಲಾಖೆಯ ನಿರ್ದೇಶಕರು ಈ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದಾ ರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಕೋವಿಡ್ 19 ಲಾಕ್ಡೌನ್ ಅವಧಿ ಮುಗಿದ ಬಳಿಕ ಟಿಇಟಿ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳು ನಿಗದಿಯಾಗುವ ಸಂದರ್ಭದಲ್ಲಿ ಬೇರಾವುದೇ ಪರೀಕ್ಷೆಗಳ ದಿನಾಂಕಗಳಿಗೆ ಅಡ್ಡಿಯಾಗದ ರೀತಿಯಲ್ಲಿ ನಿಗದಿಪಡಿಸಲು ಸೂಚಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿ ಕುರಿತಂತೆ ಕೂಡಲೇ ಕೌನ್ಸೆಲಿಂಗ್ ದಿನಾಂಕವನ್ನು ನಿಗದಿಪಡಿಸಿ ಮೇ ತಿಂಗಳಿನಲ್ಲಿ ಕೌನ್ಸೆಲಿಂಗ್ ಗಳನ್ನು ಲಾಕ್ಡೌನ್ ತೆರವಿನ ನಂತರದಲ್ಲಿ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.