ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಪ್ರತಿ ವರ್ಷದಂತೆ ಈ ಭಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇ 73.70 ಫಲಿತಾಂಶ ಲಭ್ಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 1.8 ಹೆಚ್ಚಿನ ಫಲಿತಾಂಶ ಬಂದಿದೆ. ಈ ವರ್ಷವೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ.
ಇದೇ ಮೊದಲ ಭಾರಿ ಹಾಸನ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ರಾಮನಗರ ಎರಡನೇ ಸ್ಥಾನದಲ್ಲಿದ್ದು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟಾರೆ 1626 ಶಾಲೆಗಳು 100ಕ್ಕೆ 100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿರುತ್ತದೆ. ಈ ಭಾರಿ ಆನೆಕಲ್ ಊರಿನ ಸೃಜನಾ ಮತ್ತು ಕುಮಟಾದ ನಾಗಾಂಜಲಿ 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಒಟ್ಟು 11 ವಿದ್ಯಾರ್ಥಿಗಳು 625 ಕ್ಕೆ 624 ಅಂಕಗಳನ್ನು ಪಡೆದಿರುತ್ತಾರೆ.
ಮಾರ್ಚ್ 21ರಿಂದ ಏಪ್ರಿಲ್4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳು ನಡೆದಿದ್ದವು. ಒಟ್ಟು 8,25,468 ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆ ಬರೆದಿದ್ದರು ಅದರಲ್ಲಿ 4,651 ವಿಕಲಚೇತನ ಮಕ್ಕಳು ಪರೀಕ್ಷೆ ಬರೆದಿದ್ದರು. 1451 ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ಭಾಷಾ ವಿನಾಯತಿ ನೀಡಲಾಗಿತ್ತು. 480 ಅರ್ಹ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯ ವಿಷಯ ಬರೆಯುವ ಅವಕಾಶ ನೀಡಲಾಗಿತ್ತು.
ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ:
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶದ ಪ್ರಮಾಣ ಹೆಚ್ಚಿದೆ. 2018-19ನೇ ಸಾಲಿನಲ್ಲಿ ನಗರ ಪ್ರದೇಶದಲ್ಲಿ 3,71,045 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2,59,927 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 70.05ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ವಿಭಾಗದಲ್ಲಿ 4,54,423 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅದರಲ್ಲಿ 3,48,409 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 76.67ರಷ್ಟು ಫಲಿತಾಂಶ ಬಂದಿದೆ. 2017-18ನೇ ಸಾಲಿನಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದರು. ಕಳೆದ ವರ್ಷ ಶೇ 74.00 ಫಲಿತಾಂಶ ಗ್ರಾಮೀಣ ಪ್ರದೇಶದಲ್ಲಿ ಬಂದಿತ್ತು. ನಗರ ಪ್ರದೇಶದಲ್ಲಿ ಶೇ 69.38 ಫಲಿತಾಂಶ ಬಂದಿತ್ತು.