ರಾಜ್ಯಾದ್ಯಂತ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ಮೊದಲ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆಗಳು ನಡೆದಿದ್ದು ಒಟ್ಟು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಪರೀಕ್ಷೆ ನಡೆದಿದ್ದು, ಮೊದಲ ದಿನ ವಿದ್ಯಾರ್ಥಿಗಳು ನಿರಾಯಾಸವಾಗಿ ಪರೀಕ್ಷೆ ಬರೆದಿದ್ದಾರೆ. ಜಯನಗರದ ವಿಜಯ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 381 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಐದು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಸಂಸ್ಕೃತ ಭಾಷೆಯ ಪರಿಕ್ಷೆ ಬರೆದ ವಿಜಯ ಶಾಲೆಯ ವಿದ್ಯಾರ್ಥಿನಿ ಅನಘ ಮಾತನಾಡಿ " ಪರೀಕ್ಷೆಯ ತುಂಬ ಸರಳವಾಗಿತ್ತು, ಮೊದಲ ದಿನವೇ ಇಷ್ಟು ಸರಳವಾದ ಪ್ರಶ್ನೆಪತ್ರಿಕೆ ನೋಡಿ ನಮಗೆ ಖುಷಿಯಾಗಿದೆ. ಪರೀಕ್ಷೆ ಮೇಲಿನ ಅತಂಕ ಕಡಿಮೆಯಾಗಿದೆ. ಸಂಸ್ಕೃತ ಪತ್ರಿಕೆ ನಮ್ಮ ನಿರೀಕ್ಷೆಯಂತೆ ಮೂಡಿಬಂದಿದೆ. ಮೊದಲಿನಿಂದಲೂ ಉತ್ತಮವಾಗಿ ಅಭ್ಯಾಸ ಮಾಡಿದ್ದರಿಂದ ಸುಲಭವಾಗಿದೆ" ಎಂದು ಹೇಳಿದರು.
ಕನ್ನಡ ಭಾಷೆ ಪರೀಕ್ಷೆ ಬರೆದ ವಿದ್ಯಾರ್ಥಿಯೊಬ್ಬರು ಮಾತನಾಡಿ " ಕನ್ನಡ ಸುಲಭವಾಗಿತ್ತು. ವ್ಯಾಕರಣ ಭಾಗ ಸ್ಪಲ್ಪ ತಲೆಕಡಿಸಿತು ಮತ್ತು 'ಸಂದರ್ಭ ಸಹಿತ ಉತ್ತರಿಸಿ' ಕೂಡ ಹೆಚ್ಚಿನ ಸಮಯ ತೆಗೆದುಕೊಂಡಿತು. ಉಳಿದಂತೆ ಮೊದಲ ವಿಭಾಗವನ್ನು ಉತ್ತಮವಾಗಿ ಬರೆದಿದ್ದೇವೆ" ಎಂದು ಹೇಳಿದರು.
ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
ಒಟ್ಟು ನೂರು ಅಂಕಗಳ ಪ್ರಶ್ನೆಪತ್ರಿಕೆಯು 49 ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರಶ್ನೆಪತ್ರಿಕೆಯನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು ಉತ್ತರಿಸಲು ಮೂರು ಗಂಟೆಗಳ ಕಾಲಾವಕಾಶವನ್ನು ನೀಡಲಾಗಿರುತ್ತದೆ.
ಎ-ವಿಭಾಗ
ಪತ್ರಿಕೆಯ ಮೊದಲ ವಿಭಾಗವು ಪಠ್ಯಗಳ ಅಧ್ಯಯನ-ಗದ್ಯ, ಪದ್ಯ, ಪೋಷಕ ಅಧ್ಯಯನವನ್ನು ಒಳಗೊಂಡಿದೆ. ಈ ವಿಭಾಗದಲ್ಲಿ ಒಟ್ಟು 30 ಪ್ರಶ್ನೆಗಳನ್ನು ಕೇಳಲಾಗಿದ್ದು ಇವುಗಳಲ್ಲಿ ಒಂದು, ಎರಡು ಮತ್ತು ಮತ್ತು ನಾಲ್ಕು ಅಂಕಗಳ ಪ್ರಶ್ನೆಗಳು ಸೇರಿದಂತೆ ಪದ್ಯವನ್ನು ಪೂರ್ಣಗೊಳಿಸಿ, ಸಂದರ್ಭ ಸಹಿತ ಉತ್ತರಿಸಿ, ಕವಿ ಪರಿಚಯ ಪದ್ಯದ ಸಾರಾಂಶ ಕುರಿತಾದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.
ಬಿ-ವಿಭಾಗ
ಪತ್ರಿಕೆಯ ಎರಡನೇ ವಿಭಾಗವಾದ ಬಿ-ವಿಭಾಗದಲ್ಲಿ ಅನ್ವಯಿಕ ವ್ಯಾಕರಣ, ಅಲಂಕಾರ ಮತ್ತು ಛಂದಸ್ಸುಗಳ ಬಗ್ಗೆ ಕೇಳಲಾಗಿದೆ. ಈ ವಿಭಾಗದಲ್ಲಿ ಒಟ್ಟು 16 ಪ್ರಶ್ನೆಗಳನ್ನು ಕೇಳಲಾಗಿದೆ.
ಸಿ-ವಿಭಾಗ
ಪ್ರಶ್ನೆಪತ್ರಿಕೆಯ ಕೊನೆಯ ವಿಭಾಗದಲ್ಲಿ ವಾಕ್ಯರಚನೆ ಮತ್ತು ಬರವಣಿಗೆ ಕೌಶಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಒಟ್ಟು ಮೂರು ಪ್ರಶ್ನೆಗಳನ್ನು ಕೇಳಲಾಗಿದ್ದು, ಗಾದೆ ವಿಸ್ತರಣೆ, ಪತ್ರ ಬರೆಯುವುದು ಮತ್ತು ಪ್ರಬಂಧ ಬರೆಯುವುದನ್ನು ಕೇಳಲಾಗಿದೆ.
ಇದನ್ನು ಗಮನಿಸಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳಾಪಟ್ಟಿ