ಮುಂದಿನ ಶೈಕ್ಷಣಿಕ ವರ್ಷದಿಂದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎನ್ ಸಿ ಇ ಆರ್ ಟಿ ಪಠ್ಯಕ್ರಮವನ್ನು ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದ ಪಠ್ಯಕ್ರಮದ ಬದಲಾಗಿ ಎನ್ ಸಿ ಇ ಆರ್ ಟಿ ಪಠ್ಯಕ್ರಮವನ್ನು ಆರನೇ ತರಗತಿಗೆ ಅಳವಡಿಸಲಾಗುತ್ತಿದ್ದು, ಹತ್ತನೇ ತರಗತಿವರೆಗೂ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾಹಿತಿ ನೀಡಿದ್ದಾರೆ.
ಸದ್ಯ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತದ ವಿಷಯಗಳಿಗೆ ಎನ್ಸಿಇಆರ್ಟಿ ಪಠ್ಯಗಳನ್ನು ಬೋಧನೆ ಮಾಡಲಾಗುತ್ತಿದೆ. ಸಮಾಜ ವಿಜ್ಞಾನವನ್ನೂ ಕೇಂದ್ರೀಯ ಪಠ್ಯಕ್ರಮದಿಂದ ತರ್ಜುಮೆ ಮಾಡಿಕೊಳ್ಳಲು ಯೋಚಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರ ಕೈಬಿಡಲಾಗಿತ್ತು.
6 ಮತ್ತು 7ನೇ ತರಗತಿಯ ವಿಜ್ಞಾನ ಮತ್ತು ಗಣಿತ ಪುಸ್ತಕಗಳನ್ನು (ಎನ್ಸಿಇಆರ್ಟಿ) ಪಠ್ಯ ಪುಸ್ತಕಗಳನ್ನು ಯಥಾವತ್ ಕನ್ನಡಕ್ಕೆ ತರ್ಜುಮೆ ಮಾಡಿಸುವಂತೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಸೇಟ್ ಅವರು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ.
2018ರ ಜೂನ್ 1ಕ್ಕೆ ಪಠ್ಯಪುಸ್ತಕಗಳನ್ನು ವಿತರಿಸಬೇಕಾದರೆ ಈ ವರ್ಷದ ನವೆಂಬರ್ ವೇಳೆಗೆ ಮುದ್ರಣದ ಟೆಂಡರ್ ಅಂತಿಮ ಆಗಬೇಕು. ಹೀಗಾಗಿ 6,7 ಮತ್ತು 8ನೇ ತರಗತಿಯ ಕೋರ್ ವಿಷಯಗಳ ಪಠ್ಯ ಪುಸ್ತಕಗಳ ಭಾಷಾಂತರ ಕಾರ್ಯ ತಕ್ಷಣ ಆರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಎನ್ ಸಿ ಇ ಆರ್ ಟಿ ಪಠ್ಯಕ್ರಮಕ್ಕೆ ವಿರೋಧ
ಎನ್ ಸಿ ಇ ಆರ್ ಟಿ ಪಠ್ಯಕ್ರಮವನ್ನು ಆರನೇ ತರಗತಿಗೆ ಅಳವಡಿಸುವ ಕುರಿತು ಹಲವಡೆಯಿಂದ ವಿರೋಧ ವ್ಯಕ್ತವಾಗಿದೆ.
ಸದ್ಯ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿರುವ ಪಠ್ಯ ಕ್ರಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಠಿಣ ಎನಿಸಿದೆ. ಹೀಗಿರುವಾಗ ಅದಕ್ಕಿಂತಲೂ ಕಡಿಮೆ ತರಗತಿಯ ಮಕ್ಕಳಿಗೆ ಇಂತಹ ಪುಸ್ತಕಗಳನ್ನು ಬೋಧಿಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಅಲ್ಲದೆ, 6ನೇ ತರಗತಿಯಿಂದ ಕೇಂದ್ರೀಯ ಪಠ್ಯಕ್ರಮ ಅಳವಡಿಸುವ ಮುನ್ನ ಅಧ್ಯಾಪಕರು, ಶಿಕ್ಷಣ ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ. ಪ್ರೌಢ ಶಾಲೆಗಳಿಗಿಂತಲೂ ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆ ಕಡಿಮೆ ಇರುತ್ತದೆ. ಅವರು ಕೇಂದ್ರೀಯ ಪಠ್ಯಕ್ರಮದ ಪುಸ್ತಕ ಬೋಧಿಸುವುದಕ್ಕೂ ಕಠಿಣವಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಶಿಕ್ಷಣ ಇಲಾಖೆ ಸಮರ್ಥನೆ
ಕೇಂದ್ರಿಯ ಪಠ್ಯಕ್ರಮದ ಅಳವಡಿಕೆ ಕುರಿತಾಗಿ ಶಿಕ್ಷಣ ಇಲಾಖೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕಾದರೆ ಅವರಿಗೆ ಕೇಂದ್ರೀಯ ಪಠ್ಯಕ್ರಮದ ಪುಸ್ತಕಗಳು ಅಗತ್ಯ ಎಂದು ಶಿಕ್ಷಣ ಇಲಾಖೆ ಹೇಳಿದೆ.