ಶಾಲೆ ತೊರೆದು ಶಿಕ್ಷಣ ವಂಚಿತರಾಗಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ತನ್ವೀರ್ ಸೇಟ್ ತಿಳಿಸಿದ್ದಾರೆ.
ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯ 65ನೆಯ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು 'ವಿದ್ಯಾರ್ಥಿಗಳ ಸಾಧನೆಯ ಹೆಜ್ಜೆಗುರುತನ್ನು ಹಿಂಬಾಲಿಸುವ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ 'ಶಿಕ್ಷಣ ಕಿರಣ'ದ ಅಡಿಯಲ್ಲಿ ಶಾಲೆ ತೊರೆದ ನಾಲ್ಕು ಲಕ್ಷ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿರುವ ರಾಜ್ಯ ಸರ್ಕಾರ, ಅವರಲ್ಲಿ ಬಹುತೇಕ ಎಲ್ಲರನ್ನೂ ಪುನಃ ಶಾಲೆಗೆ ಕಳಿಸಲಾಗಿದೆ ಎಂದು ತಿಳಿಸಿದರು.

ಒಂದರಿಂದ ಹತ್ನನೆಯ ತರಗತಿವರೆಗಿನ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಸಾಧನೆಯನ್ನು 'ಶಿಕ್ಷಣ ಕಿರಣ' ಯೋಜನೆಯಡಿ ಸತತ ಎರಡನೆಯ ವರ್ಷ ಗಮನಿಸಲಾಗುತ್ತಿದೆ. ನಾಲ್ಕು ಲಕ್ಷ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲೆಗೆ ಬಂದಿಲ್ಲವೆಂಬುದು ಈ ವ್ಯವಸ್ಥೆಯ ಮೂಲಕ ಪತ್ತೆಯಾಯಿತು. ಆರಂಭದ ತಿಂಗಳಿನಲ್ಲಿಯೇ ಈ ನಿರ್ದಿಷ್ಟ ಮಾಹಿತಿ ಲಭಿಸಿದ್ದು ವಿದ್ಯಾರ್ಥಿಗಳನ್ನು ಪುನಃ ಶಾಲೆಗೆ ಕರೆತರಲು ಬಹಳ ಅನುಕೂಲವಾಯಿತು ಎಂದು ಅವರು ವಿವರಿಸಿದರು
ಸರ್ಕಾರಿ, ಖಾಸಗಿ, ಅನುದಾನಿತ, ಕೇಂದ್ರೀಯ ಪಠ್ಯ, ರಾಜ್ಯ ಪಠ್ಯವೆಂಬ ಭೇದವಿಲ್ಲದೆ ರಾಜ್ಯದಲ್ಲಿನ ಎಲ್ಲ ಶಾಲೆಗಳ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಯೋಜನೆಯಡಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗಿದೆ, ಅಲ್ಲದೆ ಎಲ್ಲ ವಿದ್ಯಾರ್ಥಿಗಳೂ ಚೆನ್ನಾಗಿ ಕಲಿಯಬೇಕೆಂಬ ಗುರಿಯ ಅಡಿಯಲ್ಲಿ 2017ರಲ್ಲಿ 16 ಲಕ್ಷ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.
ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಿ ನಾಲ್ಕರಿಂದ ಒಂಬತ್ತನೆಯ ತರಗತಿವರೆಗಿನ 36 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಫಲಿತಾಂಶ ಪಟ್ಟಿಗಳ ತಯಾರಿಯನ್ನು ಕೇವಲ 45 ದಿನಗಳ ಒಳಗಾಗಿ ಪೂರ್ಣಗೊಳಿಸಲಾಯಿತು. ಈ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಅವರೆಲ್ಲರಿಗೆ ಬೇಸಿಗೆ ರಜೆಯಲ್ಲಿ ವಿಶೇಷ ಪಾಠದ ಏರ್ಪಾಡು ಮಾಡಲಾಯಿತು. 'ರಿಸಲ್ಟ್ ಕಾರ್ಡ್'ಗಳು ಕೂಡ ಸಿದ್ಧವಾಗಿದ್ದು ಆಯಾ ವಿದ್ಯಾರ್ಥಿಯ ಪೋಷಕರಿಗೆ ಕಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಶಿಕ್ಷಣ ಕಿರಣ ಯೋಜನೆ
ಕಳೆದ ವರ್ಷ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ 1ರಿಂದ 10ನೇ ತರಗತಿವರೆಗಿನ ಒಂದು ಕೋಟಿ ಮಕ್ಕಳಿಗಾಗಿ ಶಿಕ್ಷಣ ಕಿರಣ ಎಂಬ ಕಾರ್ಯಕ್ರಮ ಆರಂಭಿಸಲಾಯಿತು.
ಈ ಯೋಜನೆಯಡಿ ಮಕ್ಕಳಿಗೆ ವಿಶಿಷ್ಟ ಸಂಕೇತ ಸಂಖ್ಯೆಗಳನ್ನು ನೀಡುವುದರ ಮೂಲಕ ಯಾವ ವಿದ್ಯಾರ್ಥಿ ಎಷ್ಟನೇ ತರಗತಿಯನ್ನು ಯಾವ ಹಂತದಲ್ಲಿ ಬಿಟ್ಟಿದ್ದಾನೆ ಎಂದು ಪತ್ತೆಹಚ್ಚಬಹುದು. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳ ಪೋಷಕರನ್ನು ಪತ್ತೆಹಚ್ಚಿ ಅವರನ್ನು ಮನವೊಲಿಸಬಹುದು.
ಮಕ್ಕಳ ಶೈಕ್ಷಣಿಕ ಪ್ರಗತಿ ಅಳೆಯಲು ಇದು ಸಹಾಯಕವಾಗುತ್ತದೆ. ಶಿಕ್ಷಣ ಕಿರಣ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಶಾಲೆಗಳಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಕಡಿಮೆಗೊಳಿಸುವುದರ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುತ್ತದೆ .


Click it and Unblock the Notifications











