ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕೆಎಸ್ಒಯುಗೆ ಈಗ ಮುಚ್ಚವ ಸ್ಥಿತಿ ಬಂದೊದಗಿದೆ.ಈ ಮೂಲಕ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ.
ವಿಶ್ವವಿದ್ಯಾಲಯಗಳ ಹಣಕಾಸು ಆಯೋಗ (ಯುಜಿಸಿ) ಕೆಎಸ್ಒಯುವಿನ ಮಾನ್ಯತೆಯನ್ನು ರದ್ದು ಪಡಿಸುವ ಎಲ್ಲಾ ಸೂಚನೆಯನ್ನು ನೀಡಿದ್ದು, ಕೆಎಸ್ಒಯು ಅನ್ನು ಮುಚ್ಚವ ಸ್ಥಿತಿ ಬಂದೊಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
'ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಶಿಕ್ಷಣ ತಜ್ಞರೇ ಹಾಳು ಮಾಡಿದ್ದಾರೆ. ಈಗ ವಿಶ್ವವಿದ್ಯಾಲಯವನ್ನೇ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ' ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್ಓಯು) ಭಾರಿ ಅವ್ಯವಹಾರ ನಡೆಸಿದ ಆರೋಪಕ್ಕೆ ಒಳಗಾಗಿರುವ ಇಬ್ಬರು ವಿಶ್ರಾಂತ ಕುಲಪತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಮಿತಿ ರಚನೆ
ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅವ್ಯವಹಾರ ಹಾಗೂ ಕೆಲಸ ಮಾಡದೆ ವ್ಯರ್ಥವಾಗಿ ವೇತನ ಪಡೆಯುತ್ತಿರುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಅಧ್ಯಯನ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಪ್ರೊ. ವಿ.ಬಿ.ಕುಟಿನೊ ಮತ್ತಿತರರು ಸದಸ್ಯರಾಗಿದ್ದಾರೆ ಎಂದು ಹೇಳಿದರು.
ಈ ವಿಶ್ವವಿದ್ಯಾಲಯದಲ್ಲಿ 700 ಸಿಬ್ಬಂದಿ, 98 ಪ್ರೊಫೆಸರ್ಗಳು ಹಾಗೂ 300 ಹಂಗಾಮಿ ನೌಕರರೂ ಸೇರಿ ವಾರ್ಷಿಕ ಸುಮಾರು 50 ಕೋಟಿ ವೇತನ ಪಡೆಯುತ್ತಿದ್ದಾರೆ. ಯುಜಿಸಿ ಈ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಿಲ್ಲ. ಅವರು ಮಾನ್ಯತೆ ಕೊಡದಿದ್ದಲ್ಲಿ ವಿಶ್ವವಿದ್ಯಾಲಯವನ್ನು ಮುಚ್ಚಲಾಗುವುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯಗಳಲ್ಲಿ 10 ವರ್ಷಗಳಲ್ಲಿ ಕುಲಪತಿಗಳಾಗಿದ್ದ 11 ಮಂದಿ ಅವ್ಯವಹಾರ ನಡೆಸಿರುವುದು ರಾಜ್ಯಪಾಲರು ರಚಿಸಿದ್ದ ನ್ಯಾಯಮೂರ್ತಿ ಭಕ್ತ ವತ್ಸಲ ನೇತೃತ್ವದ ಸಮಿತಿ ವರದಿಯಲ್ಲಿದೆ. ಈ ವರದಿಯನ್ನು ತರಿಸಿಕೊಂಡಿದ್ದು, ಅಧ್ಯಯನ ಮಾಡಿದ ಬಳಿಕ ಅವ್ಯವಹಾರ ನಡೆಸಿದವರ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂದು ತೀರ್ಮಾನಿಸಲಾಗುವುದು ಎಂದರು.
ಒಂದು ವೇಳೆ ಕೆಎಸ್ಒಯು ಮುಚ್ಚಿದರೆ ಅದರ ಕಟ್ಟಡವನ್ನು ಮೈಸೂರು ವಿಶ್ವವಿದ್ಯಾಲಯವೇ ಬಳಸಿಕೊಳ್ಳುವುದು ಎಂದು ಹೇಳಿದರು. ಮುಕ್ತ ವಿವಿಯ ಕಟ್ಟಡ ಮೈಸೂರು ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವುದರಿಂದ ಅದನ್ನು ಮೈಸೂರು ವಿವಿಯ ಕೌಶಲ್ಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.


Click it and Unblock the Notifications











