ಮುಚ್ಚುವ ಸ್ಥಿತಿ ತಲುಪಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಜಾಗಕ್ಕೆ ಹೊಸ ಮುಕ್ತ ವಿಶ್ವವಿದ್ಯಾಲಯವನ್ನು ತರುವ ಸೂಚನೆಯನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೀಡಿದ್ದಾರೆ.
ಮುಚ್ಚುವ ಹಂತದಲ್ಲಿ ಕೆಎಸ್ಒಯು: ಮೂರು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮುಚ್ಚುವುದು ಅನಿವಾರ್ಯವಾದರೆ ಅದೇ ಮಾದರಿಯ ಹೊಸ ವಿಶ್ವವಿದ್ಯಾಲಯ ಆರಂಭಿಸಬೇಕಾಗುತ್ತದೆ' ಎಂದು ಸಚಿವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಶ್ವವಿದ್ಯಾಲಯ ಮುಚ್ಚುವ ಪರಿಸ್ಥಿತಿ ಸದ್ಯ ಬಂದಿಲ್ಲ. ಅಂತಹ ಆಲೋಚನೆಯೂ ಸರ್ಕಾರದ ಮುಂದಿಲ್ಲ. ಅದನ್ನು ಉಳಿಸಿಕೊಳ್ಳಲು ಸರ್ಕಾರ ಎಲ್ಲ ರೀತಿ ಪ್ರಯತ್ನ ಮಾಡಲಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಾನ್ಯತೆ ನೀಡುವಂತೆ ಕೇಂದ್ರ ಸರಕಾರ ಹಾಗೂ ಯುಜಿಸಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೊಮ್ಮೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ಗೆ ಪತ್ರ ಬರೆಯಲಾಗಿದೆ ಎಂದೂ ಅವರು ಹೇಳಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಎಲ್ಲ ಷರತ್ತು ಪೂರೈಸಿದರೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಗದ ಬಗ್ಗೆ ರಾಜ್ಯ ಸರಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹಾಲಿ ಮೂಲಸೌಕರ್ಯ ಬಳಸಿಕೊಂಡು ನೂತನ ಮುಕ್ತ ವಿಶ್ವವಿದ್ಯಾಲಯ ಆರಂಭಿಸುವ ಚಿಂತನೆ ಆರಂಭಿಸಿದೆ.
ವಿಶ್ವವಿದ್ಯಾಲಯದ ಸುಧಾರಣೆ, ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅಧ್ಯಕ್ಷತೆಯಲ್ಲಿ ವ್ಹಿ.ಬಿ. ಕುಟಿನ್ಹೊ, ಬಿ.ಕೆ.ರವಿ, ಎಸ್.ಎ. ಕೋರಿ ಸದಸ್ಯರಾಗಿರುವ ಸಮಿತಿ ರಚಿಸಿ, ನವೆಂಬರ್ 15ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸಮಿತಿ ನೀಡಲಿರುವ ವರದಿ ಆಧರಿಸಿ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದರು.
ಸದ್ಯ ಮುಕ್ತ ವಿವಿಯಲ್ಲಿ 650 ಕೋಟಿ ರೂ. ಠೇವಣಿ ಇಡಲಾಗಿದೆ. 15ಕ್ಕೂ ಹೆಚ್ಚು ವಿವಿಯ ಕಟ್ಟಡಗಳು ರಾಜ್ಯದ ನಾನಾ ಕಡೆ ಖಾಲಿ ಇದ್ದು, 900 ಮಂದಿ ನೌಕರರು ಕೆಲಸ ಮಾಡುತ್ತಿದ್ದಾರೆ. 2014, 2015 ಮತ್ತು 2016ನೇ ವರ್ಷದ ಮೂರು ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿಲ್ಲ. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.