ಶಾಲೆಗಳಲ್ಲಿ ಹಾಜರಾತಿ ಸಂದರ್ಭ ಹೆಸರು ಕೂಗಿದಾಗ 'ಯಸ್ ಸಾರ್/ಮೇಡಂ' ಬದಲು 'ಜೈಹಿಂದ್' ಎನ್ನಬೇಕು ಎಂದು ಮಧ್ಯಪ್ರದೇಶದ ಸರ್ಕಾರ ಆದೇಶ ಹೊರಡಿಸಿದೆ.
ಮಕ್ಕಳಲ್ಲಿ ಈಗಿನಿಂದಲೇ ದೇಶಾಭಿಮಾನ ಮತ್ತು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಎಲ್ಲ ಶಾಲೆಗಳಲ್ಲಿ ಜೈಹಿಂದ್ ಹೇಳಬೇಕೆಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಜಯ್ ಷಾ ಈ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ ಒಂದರಿಂದ ಇದು ಕಡ್ಡಾಯವಾಗಲಿದ್ದು, ಈಗಾಗಲೇ ಮಧ್ಯಪ್ರದೇಶದ ಕೆಲವು ಶಾಲೆಗಳಲ್ಲಿ ಜೈ ಹಿಂದ್ ಹೇಳಲಾಗುತ್ತಿದೆ.

'ಸತ್ನಾದ ಖಾಸಗಿ ಶಾಲೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದೇವೆ. ಒಂದು ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ಇದನ್ನು ಮೆಚ್ಚಿಕೊಂಡು ಪ್ರಯೋಗ ಯಶಸ್ವಿಯಾದರೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅನುಮತಿ ಪಡೆದು ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಕಡ್ಡಾಯಗೊಳಿಸಲಿದ್ದೇವೆ' ಎಂದು ಷಾ ಪ್ರತಿಕ್ರಿಯಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿದಿನ ಕಡ್ಡಾಯವಾಗಿ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಗಾಯನದ ಜತೆಗೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಸಚಿವ ಷಾ ಆದೇಶಿಸಿದ್ದರು. ತಪ್ಪಿದಲ್ಲಿ ಶಾಲೆಯ ಮಾನ್ಯತೆ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದರು
ಕೆಲವು ದಿನಗಳ ಹಿಂದಷ್ಟೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಅವರು ಶಾಲಾ ಪಠ್ಯ ಕ್ರಮದಲ್ಲಿ ಯೋಗವನ್ನು ಕಡ್ಡಾಯಗೊಳಿಸಿದ್ದರು. ಹರಿಯಾಣ, ಛತ್ತೀಸ್ಗಡ ಮತ್ತು ರಾಜಸ್ತಾನದ ಶಾಲೆಗಳಲ್ಲಿ ಯೋಗವನ್ನು ಹೇಳಿಕೊಡಲಾಗುತ್ತಿದೆ. ಹಾಗೇ ರಾಜಸ್ತಾನದ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯ ಮಾಡಲಾಗಿದೆ.
ವಿಜಯ್ ಷಾ ರ ಈ ಆದೇಶಕ್ಕೆ ಕಾಂಗ್ರೆಸ್ ಪಕ್ಷ ಸೇರಿದಂತೆ ಇನ್ನಿತರ ಸಂಘಗಳಿಂದ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ಶಾಲೆಗಳಲ್ಲಿ ಶಿಕ್ಷಣ ನೀಡುವ ಬದಲು ಹಿಂದುತ್ವವನ್ನು ಹೇರುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.


Click it and Unblock the Notifications











