ತಾತ್ಕಲಿಕವಾಗಿ ತಡೆಯೊಡ್ಡಲಾಗಿದ್ದ ಐಐಟಿ ಪ್ರವೇಶ ಪರೀಕ್ಷೆ ಕೌನ್ಸಲಿಂಗ್ ಮುಂದುವರೆಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಪರೀಕ್ಷಾರ್ಥಿಗಳು ಸಲ್ಲಿಸಿದ್ದ ಮೇರೆಗೆ ನ್ಯಾಯಾಲಯವು ಕಳೆದ ಶುಕ್ರವಾರ ತಾತ್ಕಾಲಿಕವಾಗಿ ತಡೆಯಜ್ಞೆ ಹೊರಡಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಅಲ್ಲದೆ ಈ ಪ್ರಕರಣ ಸಂಬಂಧ ಯಾವುದೇ ಹೈಕೋರ್ಟ್ ಮಧ್ಯ ಪ್ರವೇಶ ಮಾಡಬಾರದೂ ಎಂದೂ ಸೂಚನೆ ನೀಡಿದ್ದಾರೆ.ಐಐಟಿಗಳ ಕೌನ್ಸೆಲಿಂಗ್ ಮತ್ತು ಪ್ರವೇಶಾತಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸದಂತೆ ಎಲ್ಲ ಹೈಕೋರ್ಟ್ಗಳಿಗೆ ಸೂಚಿಸಿದೆ.
ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳು ನುಸುಳುವುದಿಲ್ಲ ಮತ್ತು ಪರೀಕ್ಷೆ ಬರೆದವರಿಗೆ ಬೋನಸ್ ಅಂಕಗಳನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಲಿಖಿತ ಹೇಳಿಕೆ ನೀಡುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಐಐಟಿಗಳ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾಗದು ಎಂದು ಹೇಳಿದ್ದಾರೆ.
ಈಗಾಗಲೇ 33,307 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು, ಶುಲ್ಕ ಪಾವತಿ ಮಾಡಿ ತರಗತಿಗಳಿಗೆ ಹೋಗುತ್ತಿದ್ದಾರೆ. ಇನ್ನು ಕೇವಲ 31 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕಿದೆ, ಆದರೆ ಸದ್ಯದ ಸಂದರ್ಭದಲ್ಲಿ ಅದು ಸುಲಭದ ಕೆಲಸವಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಕರಣ
ಈ ಸಾಲಿನ ಐಐಟಿ ಜಂಟಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳಲ್ಲಿ ಕೆಲವು ತಪ್ಪಾಗಿದ್ದವು. ಅದಕ್ಕೆ ಪರಿಹಾರಾತ್ಮಕವಾಗಿ ಪರೀಕ್ಷೆ ಬರೆದ ಎಲ್ಲಾ ಪರೀಕ್ಷಾರ್ಥಿಗಳಿಗೂ ಹೆಚ್ಚುವರಿ ಅಂಕ ನೀಡಲಾಗಿತ್ತು. ಇದರ ವಿರುದ್ಧ ಕೆಲವು ಪರೀಕ್ಷಾರ್ಥಿಗಳು ಈ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕಳೆದ ಜುಲೈ 7ರಂದು ಆ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎ.ಎಂ. ಖಾನ್ವಿಲ್ಕರ್ ಅವರಿದ್ದ ಪೀಠವು, 'ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶ ಬರುವವರೆಗೂ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆ ನಡೆಸಬೇಡಿ' ಎಂದು ಆದೇಶಿಸಿ ಕೌನ್ಸೆಲಿಂಗ್ ತಡೆಯಾಜ್ಞೆ ನೀಡಿತ್ತು.