ಉದ್ಯೋಗ ಕಡಿತದ ಸುದ್ದಿಗಳು ದಿನೇ ದಿನೇ ಹೆಚ್ಚುತಲೇ ಇವೆ. ಮೊನ್ನೆಯಷ್ಟೇ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರು ಭಾರತದಲ್ಲಿ ಉದ್ಯೋಗ ಕಡಿತದ ವಿಚಾರವನ್ನು ತಳ್ಳಿ ಹಾಕಿದ್ದರು. ಆದರೆ, ನಿನ್ನೆ ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ವ್ಯವಸ್ಥಾಪಕ ದರ್ಜೆಯಲ್ಲಿ ಉದ್ಯೋಗ ಕಡಿತ ಮಾಡಲು ನಿರ್ಧರಿಸಿರುವುದಾಗಿ ಹೇಳಿಕೆ ನೀಡಿದೆ.
ಟಾಟಾ ಮೋಟಾರ್ಸ್ ಸಂಸ್ಥೆಯು ಸುಮಾರು 1500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಕಂಪನಿಯಲ್ಲಿರುವ ವೈಟ್ ಕಾಲರ್ ಶ್ರೇಣಿಯ 13 ಸಾವಿರಕ್ಕೂ ಹೆಚ್ಚು ವ್ಯವಸ್ಥಾಪಕ ದರ್ಜೆಯ ಹುದ್ದೆಗಳ ಪೈಕಿ ಶೇ. 10 ರಿಂದ 12 ಉದ್ಯೋಗಗಳನ್ನು ಕಡಿತ ಮಾಡಲಾಗಿದೆ ಎಂದು ಕಂಪನಿಯ ಎಂಡಿ ಮತ್ತು ಸಿಇಒ ಗುಂಟೆರ್ ಬುಟ್ಸ್ಚೆಕ್ ತಿಳಿಸಿದ್ದಾರೆ.
2016-17ನೇ ಆರ್ಥಿಕ ವರ್ಷದ ಕಂಪನಿಯ ಹಣಕಾಸು ವ್ಯವಹಾರದ ಕುರಿತು ಮಾಹಿತಿ ನೀಡಿದ ನಂತರ ಉದ್ಯೋಗ ಕಡಿತ ಮಾಡಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬ್ಲೂ ಕಾಲರ್ ಸೇಫ್
ಕಂಪನಿಯ ಈ ತೀರ್ಮಾನದಿಂದ ಬ್ಲೂ ಕಾಲರ್ ಕೆಲಸಗಾರರು ಅಥವಾ ಸಾಮಾನ್ಯ ಕಾರ್ಮಿಕ ವರ್ಗಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ವ್ಯವಸ್ಥಾಪಕ ಹಂತದಲ್ಲಿ 13, 000 ಉದ್ಯೋಗಿಗಳಿದ್ದು, ಕೇವಲ ಶೇ.10ರಿಂದ 12ರಷ್ಟು ಅಂದರೆ 1,500ರ ತನಕ ಹುದ್ದೆ ಕಡಿತ ಮಾಡಲಾಗಿದೆ.
ಹುದ್ದೆ ಕಡಿತಕ್ಕೆ ಕಾರಣ
ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸುವ ಒಂದು ಭಾಗವಾಗಿ ಉದ್ಯೋಗ ಕಡಿತ ಮಾಡಿರುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ. ವ್ಯವಸ್ಥಾಪಕ ಮಟ್ಟದಲ್ಲಿ ಹುದ್ದೆಗಳನ್ನು ಕಡಿತಗೊಳಿಸುವ ಕುರಿತಾಗಿ ಕಳೆದ ಹಣಕಾಸು ವರ್ಷದಲ್ಲಿ ಪರಾಮರ್ಶೆ ನಡೆಸಲಾಗಿತ್ತು. ಅದನ್ನು ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ. ನಾಯಕತ್ವ ಗುಣಗಳು, ಕಾರ್ಯಕ್ಷಮತೆ ಮತ್ತಿತರ ಅಂಶಗಳನ್ನು ಪರಾಮರ್ಶಿಸಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ
ಮರು ವಿನ್ಯಾಸಗೊಳಿಸುವ ಪ್ರಕ್ರಿಯೆಯಿಂದ ಉದ್ಯೋಗ ಕಳೆದುಕೊಂಡವರಿಗೆ, ಸ್ವಯಂ ನಿವೃತ್ತಿ ಯೋಜನೆಯಂಥ ಆಯ್ಕೆಗಳನ್ನು ನೀಡಲಾಗಿದೆ. ಕೆಲವರನ್ನು ಗ್ಲೋಬಲ್ ಡೆಲಿವರಿ ಸೆಂಟರ್ ಗೆ ವರ್ಗಾವಣೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವೆಡೆ ಉದ್ಯೋಗ ಕಡಿತ
2017ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಎಂಜಿನಿಯರಿಂಗ್ ಮತ್ತು ಕನ್ಸ್ಟ್ರಕ್ಚನ್ ವಲಯದ ಪ್ರಮುಖ ಕಂಪನಿಯಾದ ಎಲ್ ಆಂಡ್ ಟಿ 14 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿತ್ತು. ಎಚ್ಡಿಎಫ್ಸಿ ಬ್ಯಾಂಕ್ ಸಹ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಐಟಿ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಕಂಪನಿಗಳು ಈಗಾಗಲೇ ಒಂದು ಸುತ್ತಿನ ಪಿಂಕ್ ಸ್ಲಿಪ್ ಜಾಥ ನಡೆಸಿವೆ.
ಖಾಸಗಿ ವಲಯಗಳಲ್ಲಿ ಒಂದಾದ ಐಟಿ ರಂಗದಲ್ಲಿ 50 ಸಾವಿರಕ್ಕೂ ಅಧಿಕ ಉದ್ಯೋಗ ಕಡಿತವಾಗುವ ಅಂದಾಜು ಮಾಡಲಾಗಿದೆ. ವೀಸಾ ನೀತಿಗಳು ಮತ್ತು ಆಟೋಮೇಷನ್ ನಿಂದಾಗಿ ಉದ್ಯೋಗ ನಷ್ಟವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಐಟಿ ಮಾತ್ರವಲ್ಲದೇ, ಬ್ಯಾಂಕಿಂಗ್ ಸರಕು ಸೇವೆ, ಹಣಕಾಸು ವಲಯಗಳಲ್ಲೂ ಉದ್ಯೋಗ ಕಡಿತದ ಆತಂಕ ಸೃಷ್ಟಿಯಾಗಿದೆ.