ಪರೀಕ್ಷೆ ಸಮೀಪಿಸಿದಾಗ ಮಕ್ಕಳಲ್ಲಿರುವ ಆತಂಕ ಮತ್ತು ಒತ್ತಡವನ್ನು ದೂರ ಮಾಡಬೇಕಿರುವುದು ಶಿಕ್ಷಕರ ಕರ್ತವ್ಯ, ಆದರೆ ಶಿಕ್ಷಕರೇ ಮಕ್ಕಳಲ್ಲಿ ಆತಂಕವನ್ನು ಸೃಷ್ಟಿಸುತ್ತಿರುವುದು ಕಂಡು ಬಂದಿದೆ.
ಶಾಲೆಗಳ ಫಲಿತಾಂಶದ ಮಟ್ಟ ಹೆಚ್ಚಿಸಲು ಶಿಕ್ಷಕರು ಪೈಪೋಟಿಗೆ ಬಿದ್ದಿದ್ದು, ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ.
ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಹಾಗೂ ಇನ್ನಿತರೆ ಸಂಘಗಳು ಎರಡು- ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುವಂತಾಗಿದೆ.

ಮುಖ್ಯ ಪರೀಕ್ಷೆಗೂ ಮುನ್ನ ಒಂದು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವುದು ಉತ್ತಮ. ಇದರಿಂದ ಮಕ್ಕಳಿಗೆ ಪರೀಕ್ಷೆ ಮೇಲಿನ ಆತಂಕ ಕಡಿಮೆಯಾಗಿ ಮುಖ್ಯ ಪರೀಕ್ಷೆ ಎದುರಿಸಲು ಅನುಕೂಲವಾಗುತ್ತದೆ. ಆದರೆ ಎರಡು ಮೂರು ನಡೆಸಿ ಮಕ್ಕಳಿಗೆ ಹೆಚ್ಚು ಒತ್ತಡ ಸೃಷ್ಟಿ ಮಾಡುವ ಶಾಲೆಗಳ ನೀತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕಳೆದ ವರ್ಷ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಸಮಯದಲ್ಲಿ ಹಳೇ ಪದ್ಧತಿಯನ್ವಯ ಪರೀಕ್ಷೆ ನಡೆಸಿದ್ದರಿಂದ ಗೊಂದಲ ಉಂಟಾಗಿ ಪ್ರೌಢಶಾಲಾ ಶಿಕ್ಷಕರ ಸಂಘವು ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಹಾಗೂ ಪರೀಕ್ಷೆ ನಡೆಸುವುದಕ್ಕೆ ಕಡಿವಾಣ ಹಾಕಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂದಿನ ಆಯುಕ್ತರಾಗಿದ್ದ ಸೌಜನ್ಯಾ ಅವರು ಈ ಸಂಬಂಧ ಕಠಿಣ ನಿರ್ಧಾರ ಕೈಗೊಂಡಿದ್ದರು.
ಆದರೆ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಹಳೇ ಪದ್ಧತಿಯನ್ವಯ ತಾನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಬೇಕೆಂಬ ಉದ್ದೇಶದಿಂದ ಈ ವರ್ಷ ಮತ್ತೆ ಇಲಾಖೆಯ ಅನುಮತಿ ಪಡೆದಿದೆ.
ಆದರೆ, ರಾಜ್ಯ ಮಟ್ಟದಲ್ಲಿ ಒಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವುದಕ್ಕೆ ಇಲಾಖೆಯ ಅಭ್ಯಂತರವಿಲ್ಲ. ಆದರೆ, ಸಂಘವು ಬೇರೆ ಬೇರೆ ಸಂಘಟನೆಗಳ ಮೂಲಕ ರಾಜ್ಯ ಮಟ್ಟದ ಪರೀಕ್ಷೆ ಜತೆಗೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಮತ್ತೆರಡು ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಪರೀಕ್ಷೆಯ ಮೌಲ್ಯವನ್ನೇ ಕುಸಿಯುವಂತೆ ಮಾಡಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
''ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘಕ್ಕೆ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಅನುಮತಿ ನೀಡಿರುವುದರ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ, ರಾಜ್ಯಮಟ್ಟದಲ್ಲಿ ಒಂದೇ ಒಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಯಬೇಕು. ಬೇರೆ ಬೇರೆ ಸಂಘಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ನಡೆಸುವುದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ಅಂತಹ ಸಂಘಗಳ ವಿರುದ್ಧ ಕಾನೂನುರೀತ್ಯ ಕ್ರಮ ಜರುಗಿಸಬೇಕು'' ಎಂದು ಪ್ರೌಢಶಾಲಾ ಶಿಕ್ಷಕರ ಸಂಘಟನೆಯ ಪದಾಕಾರಿಯೊಬ್ಬರು ಆಗ್ರಹಿಸಿದ್ದಾರೆ.
''ಈ ರೀತಿ ಎರಡು-ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಅಲ್ಲದೆ, ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ನಂತರ ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲು ಕಾಲಾವಕಾಶವೂ ಇಲ್ಲ. ಈ ಹಿನ್ನೆಲೆಯಲ್ಲಿ ಒಂದೇ ಒಂದು ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಇಲಾಖೆ ಕ್ರಮ ಕೈಗೊಳ್ಳಬೇಕು'' ಎಂದು ಅವರು ಒತ್ತಾಯಿಸಿದ್ದಾರೆ.


Click it and Unblock the Notifications











