ಸದಾ ಒಂದಲ್ಲ ಒಂದು ಕಾರಣಗಳಿಂದ ಹೆಸರು ಕೆಡಿಸಿಕೊಂಡಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ಬಗ್ಗೆ ನ್ಯಾಯಾಲಯವೇ ಬೇಸರ ವ್ಯಕ್ತಪಡಿಸಿದೆ.
2011 ನೇ ಸಾಲಿನ ಕೆಎಎಸ್ ನೇಮಕಾತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮುರ್ತಿ ಎಚ್.ಜಿ ರಮೇಶ್ ಮತ್ತು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಕೆಪಿಎಸ್ಸಿಯ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪ್ರತಿ ವರ್ಷ ಒಂದು ಸಣ್ಣ ದೂರಿಲ್ಲದೆ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸಿ, ದೇಶಕ್ಕೆ ಒಳ್ಳೆಯ ಅಧಿಕಾರಿಗಳನ್ನು ನೀಡುತ್ತಿದೆ. ಆದರೆ ಕೆಪಿಎಸ್ಸಿ ಕರ್ಮಕಾಂಡಗಳಲ್ಲೇ ಮುಳುಗಿ ಹೋಗಿದೆ, ಅದು ಎಂದಿಗೂ ಯುಪಿಎಸ್ಸಿ ರೀತಿ ಆಗಲು ಸಾಧ್ಯವಿಲ್ಲ ಅಲ್ಲವೇ? ಎಂದು ಪ್ರಶ್ನಿಸಿದೆ.
ಕೆಪಿಎಸ್ಸಿ ಈ ರೀತಿ ಆಗಲು ಅದಕ್ಕೆ ನೇಮಕವಾಗುತ್ತಿರುವ ಸದಸ್ಯರೇ ಕಾರಣ ಎನಿಸುತ್ತಿದೆ. ಕೆಪಿಎಸ್ಸಿ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಪ್ರತಿಭಾವಂತರು ಬೇಸತ್ತು ಯುಪಿಎಸ್ಸಿ ಕಡೆ ಮುಖ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಸರಕಾರ ಮತ್ತು ಆಯೋಗಕ್ಕೆ ಛೀಮಾರಿ ಹಾಕಿದೆ.
ಕೆಪಿಎಸ್ಸಿ ಬಗ್ಗೆ ಮೂಟೆಗಟ್ಟಲೆ ದೂರುಗಳಿವೆ ಎಂದು ಸರಕಾರವೇ ಒಪ್ಪಿಕೊಳ್ಳುತ್ತದೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ. ಕೆಪಿಎಸ್ಸಿ ಇತಿಹಾಸ ನೋಡಿದರೆ ಗಾಬರಿಯಾಗುತ್ತದೆ. ಒಂದು ಬ್ಯಾಚ್ ನ ನೇಮಕವೂ ಸರಿಯಾಗಿ, ಯಾವುದೇ ದೂರು ಇಲ್ಲದೆ ನಡೆದಿರುವ ಉದಾಹರಣೆಯೇ ಇಲ್ಲ ನ್ಯಾಯಪೀಠ ಹೇಳಿದೆ.
1998 ರಿಂದಲೂ ಒಂದಲ್ಲ ಒಂದು ಆರೋಪಗಳು ಇದ್ದೇ ಇವೆ. ಹಾಗಾಗಿ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ಕೆಪಿಎಸ್ಸಿಯತ್ತ ನೋಡದೆ, ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿ ಅಧಿಕಾರಿಗಳಾಗುತ್ತಿದ್ದಾರೆ. ಅಲ್ಲಿ ಪ್ರತಿಭೆಗೆ ಮಾತ್ರ ಬೆಲೆ ಇದೆ. ಹಾಗಾಗಿ ನಾಗರಿಕ ಸೇವಾ ಅಧಿಕಾರಿಗಳಾಗುವ ಆಕಾಂಕ್ಷಿಗಳಿಗೆ ಯುಪಿಎಸ್ಸಿ ಬಗ್ಗೆ ಮಾತ್ರ ವಿಶ್ವಾಸವಿದೆ. ನಿಜಕ್ಕೂ ಯುಪಿಎಸ್ಸಿ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದೆ.


Click it and Unblock the Notifications











