2011ನೇ ಸಾಲಿನ ಕೆಎಎಸ್ ನೇಮಕಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕಳೆದ ಎರಡು ವಾರಗಳಿಂದ ಸತತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಪೀಠ ಬುಧವಾರ ವಾದ ಪ್ರತಿವಾದಗಳ ಆಲಿಕೆ ಪೂರ್ಣಗೊಳಿಸಿತು.
ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಸಿಜೆ ಎಚ್ ಜಿ ರಮೇಶ್ ಮತ್ತು ನ್ಯಾ.ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ನಡೆಸಿದೆ. ಆಯ್ಕೆಯಾಗಿರುವ 362 ಅಭ್ಯರ್ಥಿಗಳು ಹಾಗೂ ಸಂದರ್ಶನಕ್ಕೆ ಎದುರಾದ ಎಲ್ಲ 1080ಅಭ್ಯರ್ಥಿಗಳ ಸಂದರ್ಶನ ಅಂಕದ ವಿವರಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಕೆಪಿಎಸ್ಸಿ ಪರ ವಾದಿಸಿದ ಹಿರಿಯ ವಕೀಲ ಪಿ,ಎಸ್ ರಾಜಗೋಪಾಲ್ 'ನ್ಯಾಯಾಲಯ ಎಷ್ಟು ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರೋ ಎಲ್ಲರ ಅಂಕಗಳ ವಿವರಗಳನ್ನು ಸಲ್ಲಿಸಬೇಕೆಂದು ಕೇಳಿದೆ. ಆ ವಿವರಗಳನ್ನು ಕ್ರೋಢೀಕರಿಸಲಾಗುತ್ತಿದ್ದು, ಇನ್ನೆರುಡು ದಿನಗಳಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಸರಕಾರದ ಪರ ವಾದಿಸಿದ ಎಎಜಿ ಆದಿತ್ಯ ಸೋಂದಿ ನಿಯಮದಂತೆ ಕೆಪಿಎಸ್ಸಿ ನೇಮಕಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಧಾರವನ್ನು ವಿಧಾನ ಮಂಡಲದ ಉಭಯ ಸದನಗಳ ಮುಂದೆ ಮಂಡಿಸಲಾಗಿದೆ ಎಂದು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಉದಯ್ ಹೊಳ್ಳ ಸಂವಿಧಾನದ 323ನೇ ಕಲಂನಲ್ಲಿ ಉಲ್ಲೇಖಿಸಿರುವಂತೆ ಕೆಪಿಎಸ್ಸಿ ತನ್ನ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಅದನ್ನು ಸರಕಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಬೇಕು. ಜೊತೆಗೆ ಸರಕಾರಕ್ಕೆ ಆಯೋಗಕ್ಕೆ ನೀಡಿದ್ದ ನಾಗರಿಕ ಸೇವಾ ಅಧಿಕಾರಿಗಳ ನೇಮಕದ ಪ್ರಸ್ತಾವ ವಾಪಸ್ ಪಡೆಯುವ ಅಧಿಕಾರವಿದೆ ಎಂದರು.