ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧನಾ ಸಿಬ್ಬಂದಿ ನಡೆಸುವ ಕೃತಿಚೌರ್ಯದಂತಹ ಅಕ್ರಮಕ್ಕೆ ಕಟ್ಟುನಿಟ್ಟಿನ ತಡೆಹಾಕಲು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಮುಂದಾಗಿದೆ.
ಕೃತಿಚೌರ್ಯ ತಡೆಯಲು ಹೊಸ ಕರಡು ನೀತಿಯೊಂದನ್ನು ಜಾರಿಗೊಳಿಸಿದ್ದು, ಈ ನೀತಿಯ ಪ್ರಕಾರ, ಕೃತಿಚೌರ್ಯ ಸಾಬೀತಾದರೆ ಅಂತಹ ಸಂಶೋಧನಾ ವಿದ್ಯಾರ್ಥಿಯ ನೋಂದಾಣಿಯೇ ರದ್ದುಗೊಳ್ಳಲಿದೆ.
ಸದ್ಯ ಬಿಡುಗಡೆಗೊಳಿಸಿರುವ ಕರಡು ಕುರಿತು ಸಂಬಂಧಪಟ್ಟವರಿಂದ ಅಭಿಪ್ರಾಯ ಕೇಳಿರುವ ಯುಜಿಸಿ, ಅದಕ್ಕೆ ಸೆಪ್ಟೆಂಬರ್ 30ರ ಗಡುವು ನಿಗದಿಗೊಳಿಸಿದೆ.

''ವಿಶ್ವವಿದ್ಯಾಲಯಗಳಲ್ಲಿ ಕೃತಿಚೌರ್ಯ ದೊಡ್ಡ ಪಿಡುಗಾಗಿ ಕುಳಿತಿದೆ. ಇದರಿಂದ ಸಂಶೋಧನಾ ಕ್ಷೇತ್ರವನ್ನು ಪಾರುಮಾಡಬೇಕಿದೆ. ಇಂತದ್ದೊಂದು ಉದ್ದೇಶ ಇಟ್ಟುಕೊಂಡೇ ಬಿಗಿ ನಿಯಮಾವಳಿಗಳನ್ನು ರೂಪಿಸಲಾಗಿದೆ,'' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮಗಳ ಕುರಿತು ನಿಗಾ ವಹಿಸಲು ಶೈಕ್ಷಣಿಕ ದುರ್ನಡತೆ ತಡೆ ಸಮಿತಿ (ಎಎಂಪಿ) ರಚಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಅಕ್ರಮಗಳು ನಡೆದ ಮಾಹಿತಿ ಇದ್ದರೆ ಆ ಕುರಿತು ತನಿಖೆ ನಡೆಸಿ ಕೃತಿಚೌರ್ಯ ಶಿಸ್ತು ಪ್ರಾಧಿಕಾರ (ಪಿಡಿಎ)ಕ್ಕೆ ಸಮಿತಿ ವರದಿ ಸಲ್ಲಿಸಬೇಕಾಗುತ್ತದೆ ಎಂದು ಯುಜಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೃತಿಚೌರ್ಯವನ್ನು ಪತ್ತೆ ಮಾಡುವ ತಂತ್ರಾಂಶಗಳು ಲಭ್ಯವಿದ್ದು, ಅವುಗಳ ಬಳಕೆಗೂ ಸಮಿತಿ ಸಲಹೆ ನೀಡಿದೆ. ಮೂಲ ಲೇಖಕರ ಹೆಸರನ್ನು ಸೂಚಿಸದೆ ನೇರವಾಗಿ ಅವರ ಸಾಲುಗಳನ್ನು ಬಳಸಿಕೊಳ್ಳುವುದು, ಲೇಖಕರ ಅಥವಾ ಪ್ರಕಾಶಕರ ಅನುಮತಿ ಇಲ್ಲದೆ ಚಿತ್ರಗಳನ್ನು ಉಪಯೋಗಿಸುವುದು, ಬೇರೆಯವರು ಸಂಗ್ರಹಿಸಿದ ಮಾಹಿತಿಯನ್ನು ಕದ್ದು ಬಳಸುವುದು, ಇತರರ ಫಲಿತಾಂಶಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುವುದು- ಈ ನಾಲ್ಕು ಬಗೆಯ ಕೃತಿಚೌರ್ಯದ ಅಪರಾಧಗಳನ್ನು ಗಮನಿಸಿರುವ ಸಮಿತಿಯು, ವಿವಿಧ ಹಂತದ ಶಿಕ್ಷೆಗಳನ್ನೂ ಸೂಚಿಸವುದರ ಜತೆಗೆ ಹಲವು ಶಿಸ್ತು ಕ್ರಮಗಳನ್ನಉ ಕೈಗೊಳ್ಳಲು ನಿರ್ಧರಿಸಿದೆ.
ಈ ನೂತನ ನೀತಿಯಿಂದಾಗಿ ಸಂಶೋಧನಾ ಕಾರ್ಯದಲ್ಲಿ ತೊಡಗುವವರಿಗೆ ಇನ್ನಷ್ಟು ಅವಕಾಶಗಳು ದೊರೆಯಬಹುದು. ಹಾಗೆಯೇ ಜಾಗತಿಕ ಶಿಕ್ಷಣ ರಂಗದಲ್ಲಿ ಭಾರತ ಬೌದ್ಧಿಕವಾಗಿ ಕಳಂಕರಹಿತವಾದ ಛಾಪು ಮೂಡಿಸಬಹುದು. ಸಂಶೋಧನೆಯಲ್ಲಿ ಮತ್ತು ಪಿಎಚ್.ಡಿ ಪದವಿಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನವೆಂದೇ ಹೇಳಬಹುದು.


Click it and Unblock the Notifications











