ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನ ಬಳಕೆ ಮತ್ತು ಡಿಜಿಟಲ್ ತರಗತಿಗಳ ಕಡೆಗೆ ಗಮನ ಹರಿಸಲಾಗಿದೆ.
ಈ ಬಾರಿಯ ಬಜೆಟ್ನಲ್ಲಿ ಶೇಕಡ 1ರಷ್ಟು ಶಿಕ್ಷಣ ಕ್ಷೇತ್ರದ ಸೆಸ್ ಹೆಚ್ಚಿಸಲಾಗಿದೆ. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಡಿಜಿಟಲ್ ಯುಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಲಾಗಿದ್ದು, 'ಕಪ್ಪು ಹಲಗೆ'ಯಿಂದ 'ಡಿಜಿಟಲ್ ಹಲಗೆ'ಗೆ ಪರಿವರ್ತಿಸುವ ಯೋಜನೆ ಪ್ರಕಟಿಸಲಾಗಿದೆ.
ಏಕಲವ್ಯ ವಸತಿ ಶಾಲೆ
ಬುಡಕಟ್ಟು ಜನಾಂಗದ ಮಕ್ಕಳಿಗೆ ಅವರದ್ದೇ ಆದ ಪರಿಸರದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ವಸತಿ ಶಾಲೆ ಶಾಲೆಗಳನ್ನು ತೆರೆಯಲು ಯೋಜಿಸಲಾಗಿದೆ. 2022ರ ಒಳಗೆ ಶೇ 50ರಷ್ಟು ಪರಿಶಿಷ್ಟ ಪಂಗಡದವರು ವಾಸಿಸುವ ಇಲ್ಲವೇ ಕನಿಷ್ಠ 20 ಸಾವಿರ ಬುಡಕಟ್ಟು ಜನರು ವಾಸಿಸುವ ಪ್ರದೇಶದ ಪ್ರತಿ ತಾಲ್ಲೂಕಿನಲ್ಲಿ ನವೋದಯ ಮಾದರಿ ಶಾಲೆಯಲ್ಲಿ ಏಕಲವ್ಯ ವಸತಿ ಶಾಲೆ
ಆರಂಭಿಸಲಾಗುವುದು.
ಪೂರ್ವ ನರ್ಸರಿಯಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ಸಮಗ್ರವಾಗಿ ಪರಿಗಣಿಸಲಾಗುವುದು. ಈ ಹಂತದಲ್ಲಿ ಯಾವುದೇ ತರಗತಿಗಳನ್ನು ಪ್ರತ್ಯೇಕಗೊಳಿಸುವುದಿಲ್ಲ ಎಂದು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಸಂರಕ್ಷಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಕ್ರೀಡೆ ಮತ್ತು ಕೌಶಲ ಅಭಿವೃದ್ಧಿಗೆ ತರಬೇತಿ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ. ಇದೇ ವೇಳೆ ಶಿಕ್ಷಕರ ತರಬೇತಿಗಾಗಿ ಸಮಗ್ರ ಬಿ.ಎಡ್ ಕೋರ್ಸ್ ನ್ನು ಪ್ರಾರಂಭಿಸುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಲಿಕಾ ಗುಣಮಟ್ಟದ ವಾಸ್ತವ ಸ್ಥಿತಿ ಅರಿಯಲು ರಾಷ್ಟ್ರಮಟ್ಟದಲ್ಲಿ 20ಲಕ್ಷ ವಿದ್ಯಾರ್ಥಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಜಿಲ್ಲಾವಾರು ಕಾರ್ಯಕ್ರಮ ರೂಪಿಸಲು ನೆರವಾಗುತ್ತದೆ ಎಂದು ಸಚಿವ ಅರುಣ್ ಜೇಟ್ಲಿ ವಿವರಿಸಿದರು.
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಲ್ಲೂ (ಎನ್ಐಟಿ) ಹೆಚ್ಚುವರಿಯಾಗಿ 18 ಯೋಜನೆ ಮತ್ತು ವಾಸ್ತುಶಿಲ್ಪ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನ ಪ್ರಮುಖ ಅಂಶಗಳು
- ಪ್ರತಿ ವರ್ಷ 1000 ಬಿ. ಟೆಕ್ ನ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಧಾನ ಮಂತ್ರಿ ಸ್ಕಾಲರ್ ಶಿಪ್ ಅಡಿಯಲ್ಲಿ ಐಐಟಿಗಳಲ್ಲಿ ಪಿಹೆಚ್ ಡಿ ಮಾಡಲು ಉತ್ತೇಜನ, ಪ್ರಧಾನ ಮಂತ್ರಿ ಸ್ಕಾಲರ್ ಶಿಪ್
- ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ
- ಏಕಲವ್ಯ ವಸತಿ ಶಾಲೆಯಿಂದ 20 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ
- ಶಿಕ್ಷಣ ಸೆಸ್ ಶೇ.4ರಷ್ಟು ಏರಿಕೆ
- ಶಿಕ್ಷಣ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ಅನುದಾನ
- 24 ಹೊಸ ಮೆಡಿಕಲ್ ಕಾಲೇಜು
- 2022 ರ ವೇಳೆಗೆ ರೈಸ್ (Revitalising Infrastructure and Systems in Education) ಪುನಾರಂಭ
ಸಂಶೋಧನೆಗೆ ಒತ್ತು
ಆರೋಗ್ಯ ಸಂಸ್ಥೆಗಳು ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿನ ಸಂಶೋಧನೆಗೆ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಕಲ್ಪಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ₹1ಲಕ್ಷ ಕೋಟಿ ಹೂಡಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಮೂಲಸೌಕರ್ಯಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಶಿಕ್ಷಣ ವ್ಯವಸ್ಥೆಗಾಗಿ ಹೊಸ ಯೋಜನೆ 'ಆರ್ಐಎಸ್ಇ' ಆರಂಭಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಗಳ ಅನುಷ್ಠಾನಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಹಣಕಾಸು ನೆರವು ಒದಗಿಸುವ ಸಂಸ್ಥೆಯನ್ನು (ಎಚ್ಇಎಫ್ಎ) ಸಮರ್ಪಕವಾಗಿ ರಚಿಸಲು ಉದ್ದೇಶಿಸಲಾಗಿದೆ.